ನವದೆಹಲಿ: ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಭವಿಷ್ಯ ಇನ್ನೂ ಅನಿಶ್ಚಿತವೆನಿಸಿದೆ. ಭಾನುವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಇದೇ ವೇಳೆ, ಮುಂದಿನ ಫೆಬ್ರವರಿಯಿಂದ ಮಹಿಳಾ ಕ್ರಿಕೆಟ್ ಋತುವಿಗೆ ಚಾಲನೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಕರೊನಾ ಹಾವಳಿಯಿಂದಾಗಿ ತಡವಾಗಿ ಆರಂಭಗೊಂಡಿರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸದ್ಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ನಡೆಯುತ್ತಿದೆ. ಇದರ ನಂತರದಲ್ಲಿ ರಣಜಿ ಟ್ರೋಫಿ ಪ್ರಥಮ ದರ್ಜೆ ಟೂರ್ನಿ ಆಯೋಜಿಸಬೇಕೇ ಅಥವಾ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ನಡೆಸಬೇಕೇ ಎಂಬ ಬಗ್ಗೆ ಬಿಸಿಸಿಐ ಇನ್ನೂ ಗೊಂದಲದಲ್ಲಿದೆ. ವಾರಾಂತ್ಯದೊಳಗೆ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.
ಇದನ್ನೂ ಓದಿ: VIDEO| ಕ್ವಾರಂಟೈನ್ ಕೊಠಡಿಯಲ್ಲಿ ಇಲಿ ಕಾಟ! ಟೆನಿಸ್ ಆಟಗಾರ್ತಿಯ ಅಳಲು
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಣಜಿ ಟ್ರೋಫಿ ಆಯೋಜನೆಯ ಬಗ್ಗೆಯೇ ಹೆಚ್ಚಿನ ಒಲವು ಹೊಂದಿದ್ದಾರೆ. ಆದರೆ ಮಂಡಳಿಯ ಇತರ ಕೆಲ ಸದಸ್ಯರು ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳು ವಿಜಯ್ ಹಜಾರೆ ಟ್ರೋಫಿಯನ್ನು ನಡೆಸಲು ಬಯಸಿವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಪ್ರಿಲ್-ಮೇನಲ್ಲಿ ಐಪಿಎಲ್ ನಡೆಯಲಿರುವುದರಿಂದ ರಣಜಿ ಟ್ರೋಫಿಯಂಥ ದೊಡ್ಡ ಟೂರ್ನಿಗೆ ಸೂಕ್ತ ಕಾಲಾವಕಾಶ ಲಭ್ಯವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಶ್ರೀಲಂಕಾ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ಭಾರತ ಮಹಿಳಾ ತಂಡದ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳಿಗೆ ಚಾಲನೆ ನೀಡಲು ಬಿಸಿಸಿಐ ಸಭೆಯಲ್ಲಿ ರೂಪುರೇಷೆಗಳನ್ನು ಹಾಕಿಕೊಳ್ಳಲಾಗಿದೆ.
ಟಿ20 ವಿಶ್ವಕಪ್ಗೆ ಮುನ್ನ ಕಿವೀಸ್ ವಿರುದ್ಧ ಸರಣಿ: ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪೂರ್ವಭಾವಿಯಾಗಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ತವರಿನಲ್ಲಿ ಆಡಲಿದೆ. ವಿಶ್ವಕಪ್ ಸಿದ್ಧತೆ ದೃಷ್ಟಿಯಿಂದ ಈ ವೇಳೆ ಹೆಚ್ಚಿನ ಟಿ20 ಪಂದ್ಯ ಆಡುವ ನಿರೀಕ್ಷೆ ಇದೆ. ಟಿ20 ವಿಶ್ವಕಪ್ಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದರೂ, ನೀಡದಿದ್ದರೂ ಭಾರತದ ಆತಿಥ್ಯದಲ್ಲೇ ಟೂರ್ನಿ ನಡೆಸಲು ಕೂಡ ಬಿಸಿಸಿಐ ನಿರ್ಧರಿಸಿದೆ.