ರಾಯಚೂರು: ನಗರದ ವಿದ್ಯಾಧರ ಪಾಟೀಲ್ ರಾಜ್ಯದ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸ್ಥಳೀಯ ಸಿಟಿ ಎಲೆವನ್ ತಂಡದ ಆಟಗಾರರಾಗಿರುವ ವಿದ್ಯಾಧರ ಪಾಟೀಲ್ ಚಿಕ್ಕಂದಿನಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು. ಪಾಲಕರು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದರು. ರಣಜಿ ತಂಡಕ್ಕೆ ಆಯ್ಕೆಗೊಳ್ಳುವಲ್ಲಿ ಸಿಟಿ ಎಲೆವನ್ ತಂಡದ ಪಾತ್ರವೂ ಪ್ರಮುಖವಾಗಿದೆ.
19 ವರ್ಷದೊಳಗಿನ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ವಿದ್ಯಾಧರ, 2019-20ನೇ ಸಾಲಿನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿ ಬಾಲಿಂಗ್ನಲ್ಲಿ ಉತ್ತಮ ಸಾಧನೆ ತೋರಿದ್ದರು. ಬಾಲಿಂಗ್ ವಿಭಾಗದಲ್ಲಿನ ಸಾಧನೆ ಗುರುತಿಸಿ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಮೊದಲು ನಗರದ ಯರೇಗೌಡ ರಣಜಿ ತಂಡದ ಸದಸ್ಯರಾಗಿ, ನಾಯಕರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದರು.