ನವದೆಹಲಿ: ಈಗಾಗಲೇ ಶತಮಾನಗಳಷ್ಟು ಕಾನೂನು ಹೋರಾಟ ನಡೆಸಿ ಬಗೆಹರಿದಿರುವ ಅಯೋಧ್ಯೆಯ ರಾಮಮಂದಿರ ವಿವಾದ ಭವಿಷ್ಯದಲ್ಲಿ ಎಂದಿಗೂ ಕಾಡದಿರಲಿ, ರಾಮಮಂದಿರವು ಎಂದಿಗೂ ಬಿಕ್ಕಟ್ಟಾಗಿ ಪರಿಣಮಿಸದಿರಲಿ ಎನ್ನುವ ಕಾರಣಕ್ಕೆ ಇದೀಗ ಯೋಜನೆಯೊಂದನ್ನು ರೂಪಿಸಲಾಗಿದೆ.
ಇದರ ಅನ್ವಯ ರಾಮ ಮಂದಿರದ ಜಾಗದಿಂದ ಸುಮಾರು ಎರಡು ಸಾವಿರ ಅಡಿ ಆಳದಲ್ಲಿ ಬೃಹತ್ ತಾಮ್ರ ಫಲಕವೊಂದರ ಮೇಲೆ ರಾಮಜನ್ಮ ಭೂಮಿ ವಿವಾದದ ಇತಿಹಾಸ ಇವೆಲ್ಲದರ ಮಾಹಿತಿಯನ್ನು ಕೆತ್ತಿಸಿ, ಅದನ್ನು ಹುದುಗಿಡಲು ನಿರ್ಧರಿಸಲಾಗಿದೆ.
ಈ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರಾದ ಕಮಲೇಶ್ವರ್ ಚೌಪಾಲ್ ಮಾಹಿತಿ ನೀಡಿದ್ದಾರೆ. ಈ ಮಂದಿರದ ವಿವಾದ ಸುಪ್ರೀಂಕೋರ್ಟ್ವರೆಗೂ ಹೋಗಿ ಬರಬೇಕಾಯ್ತು. ಭವಿಷ್ಯದಲ್ಲಿ ಇಂಥ ಸಮಸ್ಯೆ ಎದುರಾಗಬಾರದು. ಅಷ್ಟೇ ಅಲ್ಲದೇ, ಮುಂದಿನ ಪೀಳಿಗೆಯವರಿಗೂ ಈ ಮಂದಿರದ ಕುರಿತ ಇತಿಹಾಸ ತಿಳಿಯಬೇಕು. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಕೆಲಸಕ್ಕೆ ಮುಂದಾಗಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ರಾಮ ಜನ್ಮಭೂಮಿ ಇತಿಹಾಸ, ನಂತರದ ದಿನಗಳಲ್ಲಿ ಉಂಟಾದ ವಿವಾದ, ಕಾನೂನು ಸಮರ, ಕಾಲಾನುಕಾಲಕ್ಕೆ ಕೈಗೊಳ್ಳಲಾದ ನಿರ್ಣಯಗಳು, ಕಾನೂನಾತ್ಮಕ ನಿರ್ಧಾರಗಳು, ಕೋರ್ಟ್ಗಳಿಂದ ಕಾಲಕಾಲಕ್ಕೆ ಹೊರಬಂದ ಆದೇಶ, ತೀರ್ಪುಗಳು, ಅಂತಿಮವಾಗಿ ಸಿಕ್ಕ ತೀರ್ಪು. ಆನಂತರೂ ನಡೆದ ವಿವಾದ… ಇವೆಲ್ಲವುಗಳ ಬಗ್ಗೆ ತಾಮ್ರ ಫಲಕದಲ್ಲಿ ಕೆತ್ತಿಸಲಾಗುತ್ತದೆ. ಮುಂದೊಂದು ದಿನ ಏನೇ ವಿವಾದ ಎದುರಾದರೂ, ರಾಮಮಂದಿರದ ಕುರಿತು ಯಾರೇ ಆಗಲಿ ಚಕಾರ ಎತ್ತಿದರೂ ಇಲ್ಲಿಂದ ಅವರಿಗೆ ಉತ್ತರ ಸಿಗಲಿದೆ. ಈ ನಿಟ್ಟಿನಲ್ಲಿಯೇ ಇಂಥದ್ದೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚೌಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ‘ರಾಮ ಮಂದಿರ ನಿರ್ಮಾಣಕ್ಕೆ ಸರ್ವ ಸಮದಾಯಗಳಿಂದಲೂ ದೇಣಿಗೆ ಸ್ವೀಕಾರ’
ಭಾರತಕ್ಕೆ ಬಾಬರ್ ದಾಳಿ ಮಾಡಿದ ಸಂದರ್ಭದಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದರು ಎನ್ನುವ ಆರೋಪವಿದೆ. ಇದೇ ಕಾರಣಕ್ಕಾಗಿಯೇ ಸುಪ್ರೀಂಕೋರ್ಟ್ನಲ್ಲಿ ಸುಮಾರು 4 ದಶಕಗಳ ಕಾಲ ಕಾನೂನು ಹೋರಾಟ ನಡೆದಿದೆ.
ಭವಿಷ್ಯದಲ್ಲಿ ರಾಮ ಮಂದಿರದ ಐತಿಹ್ಯದ ಬಗ್ಗೆ ಪ್ರಶ್ನೆಗಳು ಎದ್ದಾಗ ಈ ತಾಮ್ರ ಫಲಕವು ಒಂದು ತೆರೆದ ಪುಸ್ತಕದಂತೆ ಅವರಿಗೆ ಪೂರಕ ಮಾಹಿತಿ ನೀಡುತ್ತದೆ. ಮುಂದೆ ಇತಿಹಾಸಕಾರರು ಅಥವಾ ಸಂಶೋಧಕರು ಮಂದಿರಕ್ಕೆ ಸಂಬಂಧಿಸಿ ಎಂದೂ ಪ್ರಶ್ನೆ ಎತ್ತಬಾರದು. ಹಾಗೆಯೇ ಮತ್ತೆ ಎಂದಾದರೂ ಕೋರ್ಟ್ ಮೆಟ್ಟಿಲೇರಿದರೆ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು ಎಂದು ಈ ಸಂಪುಟವನ್ನು ಹುದುಗಿಡಲಾಗುತ್ತಿದೆ ಎಂದಿದ್ದಾರೆ.
ಮಕ್ಕಳಿಗಾಗಿ ‘ಏಕೈಕ ಹಸು’ ಮಾರಿದ ಘಟನೆಗೆ ಟ್ವಿಸ್ಟ್: ಕೊಟ್ಟಿಗೆ ತುಂಬಾ ದನಗಳು!