ಗಂಗೊಳ್ಳಿ: ಬಂದರಿನ ಕಚೇರಿಗೆ ರಿಪೇರಿಗೆ ತರುತ್ತಿದ್ದ ಮೀನುಗಾರಿಕಾ ಬೋಟು ಗಂಗೊಳ್ಳಿ ಅಳಿವೆ ಸಮೀಪ ನೀರಿನಲ್ಲಿ ಶುಕ್ರವಾರ ಮುಳುಗಿದೆ.
ಉಡುಪಿ ಜಿಲ್ಲೆಯ ಕೊಡವೂರು ಗ್ರಾಮದ ವಡಭಾಂಡೇಶ್ವರ ನಿವಾಸಿ ಗೋಪಾಲ ಸುವರ್ಣ ಮಾಲೀಕತ್ವದ ಮಾಲ್ತಿದೇವಿ ಬೋಟ್ನಲ್ಲಿ ಸಾಸ್ತಾನ ಕೋಡಿ ಕನ್ಯಾನದ ಸುರೇಶ ಕುಂದರ್, ಶಂಕರ ಕುಂದರ್, ಶಂಕರ ಪೂಜಾರಿ, ಯೋಗೇಂದ್ರ, ಫರೀದ್ ಅಬ್ದುಲ್ ಘನಿ ಶೇಖ್ ಎಂಬುವರು ಮೇ 16ರಂದು ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು.
ಮೇ 17ರಂದು ಬೆಳಗ್ಗೆ 5ಕ್ಕೆ ಭಟ್ಕಳ ಸಮೀಪ ಮತ್ತೊಂದು ಬೋಟ್ ಡಿಕ್ಕಿ ಹೊಡೆದ ಪರಿಣಾಮ ಮಾಲ್ತಿದೇವಿ ಬೋಟ್ನ ಮಧ್ಯಭಾಗದ ಅಡಿ ಹಲಗೆ ಎದ್ದು ಹೋಗಿ ನೀರು ಒಳಗೆ ಬರಲು ಆರಂಭಿಸಿದೆ. ಇದೇ ಸಂದರ್ಭ ಡಿಕ್ಕಿ ಹೊಡೆದ ಹಾಗೂ ಇನ್ನೊಂದು ಬೋಟ್ನಲ್ಲಿದ್ದ ಮೀನುಗಾರರು ಮಾಲ್ತಿದೇವಿ ಬೋಟನ್ನು ಹಗ್ಗದಲ್ಲಿ ಕಟ್ಟಿ ಗಂಗೊಳ್ಳಿ ಬಂದರಿನ ಕಚೇರಿಗೆ ರಿಪೇರಿಗಾಗಿ ತರುತ್ತಿರುವಾಗ ಗಂಗೊಳ್ಳಿ ಅಳಿವೆಯಿಂದ ಸುಮಾರು 8ರಿಂದ 10 ಮಾರು ದೂರದಲ್ಲಿ ಬೋಟ್ ನೀರಿನಲ್ಲಿ ಮುಳುಗಿದೆ. ಬೋಟ್ನಲ್ಲಿದ್ದ ಮೀನುಗಾರರನ್ನು ಇತರ ಬೋಟ್ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಬೋಟ್ನಲ್ಲಿದ್ದ ಟ್ರಾಲ್ ಬಲೆ, 2,500 ಲೀ. ಡೀಸೆಲ್, ಇಂಜಿನ್, ಇನ್ನಿತರ ಸಲಕರಣೆಗಳು ನೀರುಪಾಲಾಗಿದೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.