ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರು ರಾಜಕೀಯಕ್ಕೆ ಬರಲಿದ್ದಾರೆ. ಅವರು ಹೊಸದೊಂದು ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದಲೂ ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಈ ಬಾರಿಯ ಮಾರ್ಚ್ನಲ್ಲಿ ಕೂಡ ತಾವು ರಾಜಕೀಯ ಪ್ರವೇಶಿಸುವುದು ನಿಶ್ಚಿತ ಎಂದು ಘೋಷಿಸಿದ್ದರು. ಆದರೆ ಪಕ್ಷ ಘೋಷಣೆಯನ್ನು ಮಾಡಿರಲಿಲ್ಲ.
ಇದೀಗ ಅವರ ಆಪ್ತರಲ್ಲಿ ಒಬ್ಬರಾದ, ಚೆನ್ನೈನ ಮಾಜಿ ಡೆಪ್ಯೂಟಿ ಮೇಯರ್ ಕರಾಟೆ ತ್ಯಾಗರಾಜ್ ಅವರು ರಜನೀಕಾಂತ್ ಅವರ ಹೊಸ ರಾಜಕೀಯ ಪಕ್ಷ ನವೆಂಬರ್ನಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾಧ್ಯಮವೊಂದರ ಜತೆ ಮಾತನಾಡಿದ ಕರಾಟೆ ತ್ಯಾಗರಾಜ್, ಈ ಬಾರಿ ಮಾರ್ಚ್ನಲ್ಲಿ ರಜನೀಕಾಂತ್ ಅವರು ಆಗಸ್ಟ್ನಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನು ಉದ್ಘಾಟಿಸುವುದಾಗಿ ಹೇಳಿದ್ದರು. ಆದರೆ ಕೊವಿಡ್-19 ಪರಿಸ್ಥಿತಿಯಿಂದ ಅಗಸ್ಟ್ನಲ್ಲಿ ಅವರಿಗೆ ತಮ್ಮ ಪಕ್ಷ ಘೋಷಣೆ ಸಾಧ್ಯವಾಗುತ್ತಿಲ್ಲ. ನನಗೆ ಬಂದ ಅಧಿಕೃತ ಮಾಹಿತಿಯ ಪ್ರಕಾರ, ರಜನೀಕಾಂತ್ ಅವರು ತಮ್ಮ ಹೊಸ ರಾಜಕೀಯ ಪಕ್ಷವನ್ನು ನವೆಂಬರ್ನಲ್ಲಿ ಉದ್ಘಾಟನೆ ಮಾಡಿ, ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಕೊವಿಡ್-19 ಲಸಿಕೆಯನ್ನು ದೇಶದ ಮೂಲೆಮೂಲೆಗೂ ತಲುಪಿಸುವ ಜವಾಬ್ದಾರಿ ರಿಲಯನ್ಸ್ ಸಂಸ್ಥೆಯದ್ದು…’
ಈಗಾಗಲೇ ತಮಿಳುನಾಡಿನಲ್ಲಿ ಡಿಎಂಕೆ ನಾಯಕ ಸ್ಟಾಲಿನ್, ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಅವರಂತಹ ಯಶಸ್ವಿ ನಾಯಕರು ಇದ್ದಾರೆ. ಈ ಮಧ್ಯೆ ರಜನೀಕಾಂತ್ ಅವರು ತಮ್ಮ ಹೊಸ ಪಕ್ಷದೊಂದಿಗೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕರಾಟೆ ತ್ಯಾಗರಾಜ್ ಅವರು, ಪಳಿನಿಸ್ವಾಮಿ ಮತ್ತು ರಜನಿಕಾಂತ್ ನಡುವೆ ನೇರವಾದ ಸ್ಪರ್ಧೆ ಏರ್ಪಡುತ್ತದೆ. ಎಂ.ಕೆ.ಸ್ಟಾಲಿನ್ ಮೂರನೇ ಸ್ಥಾನದಲ್ಲಿ ಇರುತ್ತಾರೆ. ಯಾಕೆಂದರೆ ರಾಜ್ಯದಲ್ಲಿ ಅವರು ಈಗಾಗಲೇ ಮುಖ್ಯಮಂತ್ರಿಯೊಂದಿಗೆ ವೈಮನಸ್ಸು ತಳೆದಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)