ಹೈದರಾಬಾದ್: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರತಂಡದ ಯೋಚನೆಗಳೆಲ್ಲಾ ತಲೆಕೆಳಗಾದವು.
ಇದನ್ನೂ ಓದಿ: ಕಿವಿಯೋಲೆ ಹುಡುಕಿಕೊಟ್ರೆ ಬಹುಮಾನ ಕೊಡ್ತಾರಂತೆ ಜೂಹಿ ಚಾವ್ಲಾ
ಈ ಮಧ್ಯೆ, ಲಾಕ್ಡೌನ್ ತೆರವಾಗಿ ಸ್ಟಾರ್ ನಟರೆಲ್ಲಾ ಚಿತ್ರೀಕರಣಕ್ಕೆ ವಾಪಸ್ಸಾದರೂ, ರಜನಿಕಾಂತ್ ಮಾತ್ರ ಕಾದುನೋಡುವ ತಂತ್ರವನ್ನು ಅನುಸರಿಸಿದರು. ಕೆಲವು ನಟ-ನಟಿಯರಿಗೆ ಪಾಸಿಟಿವ್ ಆದ ಹಿನ್ನೆಲೆಯಲ್ಲಿ, ಇನ್ನೊಂದಿಷ್ಟು ಸಮಯ ಪರಿಸ್ಥಿತಿ ನೋಡಿಕೊಂಡು, ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ಯೋಚಿಸಿದ್ದರು.
ಈಗ ನೋಡಿದರೆ, ರಜನಿಕಾಂತ್ ಭಾನುವಾರ ತಮ್ಮ ಪುತ್ರಿ ಜೊತೆಗೆ ಹೈದರಾಬಾದ್ಗೆ ತೆರಳಿದ್ದಾರೆ. ಇಂದಿನಿಂದ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಅದರಲ್ಲಿ ಭಾಗವಹಿಸಿದ್ದಾರೆ. ಮುಂದಿನ ವರ್ಷ ಚಿತ್ರೀಕರಣ ಎಂದು ಹೇಳಿ, ಇದ್ದಕ್ಕಿದ್ದಂತೆ ರಜನಿಕಾಂತ್ ಶೂಟಿಂಗ್ನಲ್ಲಿ ಹಾಜರಾಗಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.
ಉತ್ತರವೇನೆಂದರೆ, ರಜನಿಕಾಂತ್ ಅವರು ಡಿಸೆಂಬರ್ 31ರಂದು ತಮ್ಮ ರಾಜಕೀಯ ಪಕ್ಷದ ಹೆಸರನ್ನು ಹೇಳಲಿದ್ದಾರೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ‘ಅಣ್ಣಾತ್ತೈ’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ಅದರಲ್ಲಿ ರಜನಿಕಾಂತ್ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಕೆಜಿಎಫ್ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್
‘ಅಣ್ಣಾತ್ತೆ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ಮುಂತಾದವರು ನಟಿಸುತ್ತಿದ್ದು, ಶಿವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.