ರಾಯಚೂರು: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ವ್ಯಾಪಾರ, ವಹಿವಾಟು ಸಂಪೂರ್ಣ ಬಂದ್ ಮಾಡಲಾಗಿದ್ದು, ಅನಗತ್ಯ ವಾಹನ ಸಂಚಾರಕ್ಕೆ ಪೊಲೀಸರು ಬ್ರೇಕ್ ಹಾಕಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಪಾರ್ಸಲ್ ಸೇವೆ ನೀಡಲು ತೆರೆದಿದ್ದ ಬಹುತೇಕ ಹೋಟೆಲ್ಗಳನ್ನು ಭಾನುವಾರ ಮುಚ್ಚಲಾಗಿತ್ತು. ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆಯಿತ್ತು. ಆದರೆ, ಕಿರಾಣಿ ಅಂಗಡಿಗಳನ್ನು ತೆರೆಯಲಾಗಿತ್ತು. ಮಾಂಸದ ಅಂಗಡಿಗಳ ಮುಂದೆ ಹೆಚ್ಚಿನ ಜನರು ಸೇರಿದ್ದರು. ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಿದ್ದರೂ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಚಾಲಕರಿಗೆ ಪೊಲೀಸರು ದಂಡ ವಿಧಿಸಿದರು. ಕೆಲವರು ಆಸ್ಪತ್ರೆಗೆ ಹೋಗುವುದಾಗಿ ಓಡಾಡುತ್ತಿರುವುದು ಕಂಡು ಬಂತು. ದಾಖಲೆಗಳಿದ್ದವರನ್ನು ಬಿಟ್ಟು ಉಳಿದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.