ನವದೆಹಲಿ: ಗ್ಯಾಂಗ್ಸ್ಟರ್ ವಿಕಾಸ್ ದುಬೆ ಕೊಲೆಯಾಗಿದೆ ಎಂಬುದಕ್ಕೆ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ತನಿಖಾ ಆಯೋಗ ವರದಿ ನೀಡಿದ್ದು, ಸಾರ್ವಜನಿಕರು, ಮಾಧ್ಯಮ ಮತ್ತು ಅಪರಾಧಿಯ ಕುಟುಂಬಸ್ಥರು ಸಾಕ್ಷಿ ಹೊತ್ತು ಮುಂದೆ ಬರುತ್ತಿಲ್ಲ ಎಂದು ಆಯೋಗ ದೂರಿದೆ.
ಕಳೆದ ವರ್ಷ ಜುಲೈ 3 ರಂದು ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ದುಬೆಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಎಂಟು ಮಂದಿ ಪೊಲೀಸರನ್ನು ಆತ ಕೊಂದುಹಾಕಿದ್ದ. ನಂತರ ಜುಲೈ 10ರಂದು ನಡೆದ ಎನ್ಕೌಂಟರ್ನಲ್ಲಿ ದುಬೆ ಹತನಾಗಿದ್ದ.
ಉತ್ತರ ಪ್ರದೇಶದ ಪೊಲೀಸರು ತಮ್ಮ ಬೆಂಗಾವಲು ವಾಹನದಲ್ಲಿ ಕರೆತರುವಾಗ ಶೂಟ್ ಮಾಡಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಪೊಲೀಸರು ದುಬೆಯನ್ನು ಕರೆದುಕೊಂಡು ಹೋಗುವಾಗ ಕೈಯಲ್ಲಿದ್ದ ಗನ್ ಕಿತ್ತುಕೊಳ್ಳಲು ದುಬೆ ಮುಂದಾದ. ಈ ವೇಳೆ ಬೆಂಗಾವಲು ವಾಹನ ನೆಲಕ್ಕುರುಳಿತು. ಬಳಿಕ ಗನ್ ಕಸಿದುಕೊಂಡು ಗುಂಡಿನ ದಾಳಿ ಮಾಡಿ ಓಡಿಹೋಗಲು ಯತ್ನಿಸಿದ. ಆತ್ಮರಕ್ಷಣೆಗಾಗಿ ಎನ್ಕೌಂಟರ್ ಮಾಡಬೇಕಾಯಿತು ಎಂದು ಪೊಲೀಸರು ಹೇಳಿಕೆ ನೀಡಿದ್ದರು.
ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ಗೆ ವರದಿ ನೀಡಿದ್ದ ಉತ್ತರ ಪ್ರದೇಶ ಸರ್ಕಾರ, ಪೊಲೀಸರೇ ಕೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿಯೊಂದು ದಾಖಲಿಸಲಾಗಿತ್ತು. ಸರ್ಕಾರದಿಂದ ರಚಿಸಲಾಗಿದ್ದ ಸಮಿತಿಯಲ್ಲಿ ಪೊಲೀಸರಿದ್ದರು ಎಂದು ವಿವರಣೆ ನೀಡಲಾಗಿತ್ತು. ಇದಾದ ಬಳಿಕ ಸುಪ್ರೀಂಕೋರ್ಟ್ನಿಂದ ನ್ಯಾಯಾಂಗ ಸಮಿತಿ ರಚನೆ ಆಗಿತ್ತು.
ಸುಪ್ರೀಂಕೋರ್ಟ್ ಆದೇಶದಿಂದ ರಚನೆಯಾದ ತನಿಖಾ ಆಯೋಗದ ನೇತೃತ್ವವನ್ನು ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ವಹಿಸಿಕೊಂಡಿದ್ದರು. ಪ್ರಕರಣದ ಬಗ್ಗೆ ಮಾತನಾಡಿರುವ ಅವರು ಪೊಲೀಸರ ವಿರುದ್ಧ ಸಾಕ್ಷಿ ನೀಡಲು ಯಾರೊಬ್ಬರು ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಬಾಲಕಿ ಮೇಲೆ ರೇಪ್: ಫನ್ ಬಕೆಟ್ ಭಾರ್ಗವ ಬಂಧನ ಬೆನ್ನಲ್ಲೇ ಓ ಮೈ ಗಾಡ್ ಗರ್ಲ್ ಸ್ಪಷ್ಟನೆ ಹೀಗಿದೆ…
ಸಾಕ್ಷ್ಯಾಧಾರ ಕಲೆಹಾಕಲು ಪ್ರಮಾಣಿಕ ಪ್ರಯತ್ನ ಮಾಡಿದೆವು. ಮಾಧ್ಯಮ ಮತ್ತು ಸಾರ್ವಜನಿಕರನ್ನು ಕೇಳಿದೆವು. ವಿಕಾಸ್ ದುಬೆ ಎನ್ಕೌಂಟರ್ ಕುರಿತು ಮಾಧ್ಯಮಗಳು ಅನೇಕ ವರದಿ ಮಾಡಿದ್ದವು. ಆದರೆ, ಸಾಕ್ಷಿ ನೀಡಲು ಮುಂದಾಗಲಿಲ್ಲ ಎಂದು ತನಿಖಾ ಆಯೋಗ ತಿಳಿಸಿದೆ. ಅಲ್ಲದೆ, ವಿಕಾಸ್ ದುಬೆ ಪತ್ನಿಯಾಗಲಿ ಅಥವಾ ಕುಟುಂಬ ಸದಸ್ಯರಾಗಲಿ ಮುಂದೆ ಬಂದಿಲ್ಲ ಎಂದು ಹೇಳಿದೆ. ಸ್ಥಳೀಯ ದಿನಪತ್ರಿಕೆಗಳಿಗೂ ನೋಟಿಸ್ ನೀಡಿದೆವು, ಅವರು ಕೂಡ ಪ್ರತಿಕ್ರಿಯೆ ನೀಡಲಿಲ್ಲ ಎಂದಿದೆ. (ಏಜೆನ್ಸೀಸ್)
ವಿಕಾಸ್ ದುಬೆ ಎನ್ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?
ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!