ತುಮಕೂರು: ಕೆಲವರಿಗೆ ಸಾಕು ಪ್ರಾಣಿ-ಪಕ್ಷಿಗಳು ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿರುತ್ತವೆ. ತಮ್ಮಿಷ್ಟದ ಜೀವಿಗಳು ಕಣ್ಣ ಮುಂದೆ ಒಂದು ಕ್ಷಣ ಇಲ್ಲದಿದ್ದರೆ ಏನೋ ಕಳೆದುಕೊಂಡ ಭಾವನೆ ಕಾಡುತ್ತಿರುತ್ತದೆ. ಅಂತಹುದರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾದರೆ, ಅದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ. ಇದೀಗ ಇಂಥದ್ದೇ ನೋವಿನಲ್ಲಿ ತುಮಕೂರಿನ ಕುಟುಂಬವೊಂದು ಇದೆ. ಅದಕ್ಕೆ ಕಾರಣ ಅವರ ಪ್ರೀತಿಯ ಗಿಣಿ ಕಾಣೆಯಾಗಿರುವುದು.
ಹೌದು, ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಅವರ ಕುಟುಂಬ ಗಿಣಿ ಕಳೆದುಕೊಂಡ ದುಃಖದಲ್ಲಿದೆ. ಅಲ್ಲದೆ, ಗಿಣಿ ಪತ್ತೆ ಮಾಡಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದೆ.
ಅರ್ಜುನ್ ಕುಟುಂಬ ಸಾಕಿದ್ದ ಆಫ್ರಿಕನ್ ಗ್ರೇ ಜಾತಿಯ ಗಿಣಿ ಇದೇ 16ರಂದು ತಮ್ಮ ಮನೆಯಿಂದ ನಾಪತ್ತೆಯಾಗಿದೆ. ಪ್ರೀತಿಯ ಗಿಣಿ ಕಾಣೆಯಾಗಿರುವುದಕ್ಕೆ ಅರ್ಜುನ್ ಕುಟುಂಬ ಕಣ್ಣೀರಿಡುತ್ತಿದೆ. ಗಿಣಿಗೆ ರುಸ್ತುಮಾ ಎಂಬ ಹೆಸರಿಟ್ಟು ಮನೆಯಲ್ಲಿ ತುಂಬಾ ಮುದ್ದಾಗಿ ಸಾಕಿಕೊಂಡಿದ್ದರು. ಆಫ್ರೀಕನ್ ಗ್ರೇ ತಳಿಯ ಎರಡು ಗಿಣಿಗಳನ್ನು ಎರಡೂವರೆ ವರ್ಷದಿಂದ ಮನೆಯಲ್ಲಿ ಸಾಕಲಾಗಿತ್ತು. ಅದರಲ್ಲಿ ರುಸ್ತುಮಾ ಗಿಣಿ ನಾಪತ್ತೆಯಾಗಿದ್ದು, ನೆಚ್ಚಿನ ಗಿಣಿಗಾಗಿ ಹಗಲು ರಾತ್ರಿ ಎನ್ನದೆ ಕುಟುಂಬ ಹುಡುಕಾಟ ನಡೆಸುತ್ತಿದೆ. ಗಿಣಿ ಕಾಣಿಸಿದರೆ ಮಾಹಿತಿ ನೀಡುವಂತೆ ತುಮಕೂರು ನಗರದಲ್ಲಿ ಬ್ಯಾನರ್ ಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಗಿಣಿ ಕಾಣೆಯಾಗಿರುವ ಬಗ್ಗೆ ಕುಟುಂಬ ಮಾಹಿತಿ ಹಂಚಿಕೊಂಡಿದೆ. ಅಲ್ಲದೆ, ಗಿಣಿ ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಗಿಣಿಯನ್ನು ತಮ್ಮ ಮನೆಯ ಸದಸ್ಯರಂತೆ ಕುಟುಂಬ ತುಂಬಾ ಪ್ರೀತಿಯಿಂದ ಸಾಕಿತ್ತು. ಸದ್ಯ ನಾಪತ್ತೆಯಾಗಿರುವ ಗಿಣಿಗಾಗಿ ಕುಟುಂಬ ಕಣ್ಣೀರಿಡುತ್ತಿದೆ. (ದಿಗ್ವಿಜಯ ನ್ಯೂಸ್)
ಅಪಘಾತ ಆಗಿದೆ ಅಂತ ಕರೆ ಮಾಡಿದ್ರೆ ಕಾಪಾಡುವ ಬದಲು ಪತಿಗೆ ಸಾವಿನ ದಾರಿ ತೋರಿದ ಪತ್ನಿ: ಪ್ರೀತಿ ಕೊಂದ ಕಿರಾತಕಿ?
ಒಳಉಡುಪು ಬಿಚ್ಚಿಟ್ಟು ಪರೀಕ್ಷೆ ಬರೆಯುವಂತೆ ಪಟ್ಟು: ಪಾಲಕರ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರು
ಜೈಭೀಮ್ ವಿವಾದ: ಮದ್ರಾಸ್ ಹೈಕೋರ್ಟ್ನಿಂದ ಮಹತ್ವದ ತೀರ್ಪು, ಬರ್ತಡೇಗೂ ಮುನ್ನವೇ ಸೂರ್ಯಗೆ ಬಿಗ್ ರಿಲೀಫ್