ನವದೆಹಲಿ/ಪಣಜಿ: ಬಿಜೆಪಿ ನಾಯಕಿ ಸೊನಾಲಿ ಪೋಗಟ್ರನ್ನು ಕೊಲೆ ಮಾಡಲಾಗಿದೆ ಎಂದು ಅವರ ಸಹೋದರ ರಿಂಕು ಧಾಕಾ ಆರಂಭದಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಇದೀಗ ಕೊಲೆ ಮಾಡಲು ಕಾರಣ ಏನೆಂಬುದನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.
ಬಹುಶಃ ಸೊನಾಲಿ ಅವರ ಆಸ್ತಿ ಮತ್ತು ಹಣವನ್ನು ಕಬಳಿಸಲು ಅವರ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್ ಸಿಂಗ್ ಸಂಚು ರೂಪಿಸಿ ಸೊನಾಲಿ ಅವರನ್ನು ಕೊಲೆ ಮಾಡಿದ್ದಾರೆ ಎಂದಿದ್ದಾರೆ. ಈಗಾಗಲೇ ಗೋವಾ ಪೊಲೀಸರು ಇಬ್ಬರ ವಿರುದ್ಧವೂ ಕೊಲೆ ಪ್ರಕರಣವನ್ನು ದಾಖಲಸಿ, ಬಂಧನ ಸಹ ಮಾಡಿದ್ದಾರೆ. ಇಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಸೊನಾಲಿ ಆಪ್ತ ಸಾಂಗ್ವಾನ್, ದತ್ತಪ್ರಸಾದ್ನಿಂದ ಡ್ರಗ್ಸ್ ಪಡೆದುಕೊಂಡೆವು ಎಂದು ಹೇಳಿದ್ದಾನೆ. ಸೊನಾಲಿ ಅವರು ಸೋಮವಾರ ಅಂಜುನಾ ಬೀಚ್ನಲ್ಲಿರುವ ರೆಸ್ಟೊರೆಂಟ್ ಕಂ ನೈಟ್ ಕ್ಲಬ್ನಲ್ಲಿದ್ದರು. ಅಲ್ಲಿ ಸೊನಾಲಿ ಅವರಿಗೆ ಸಂಗ್ವಾನ್ ಮತ್ತು ಸಿಂಗ್ ಸೇರಿಕೊಂಡು ನೀರಿನಲ್ಲಿ ಕೆಲ ಪದಾರ್ಥವನ್ನು ಬೆರೆಸಿ, ಬಲವಂತವಾಗಿ ಕುಡಿಸಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಮತ್ತು ತಪ್ಪೊಪ್ಪಿಗೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಗ್ವಾನ್ ಮತ್ತು ಸಿಂಗ್ ಮಾತ್ರವಲ್ಲದೆ, ಹೋಟೆಲ್ ಮಾಲೀಕ ಎಡ್ವಿನ್ ನನ್ಸ್ ಮತ್ತು ಡ್ರಗ್ಸ್ ಡೀಲರ್ ದತ್ತಪ್ರಸಾದ್ ಗಾವಂಕರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಗಾವಂಕರ್ ತಂದುಕೊಟ್ಟ ಡ್ರಗ್ಸ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದುವರಿದು ಮಾತನಾಡಿದ ರಿಂಕು ಧಾಕಾ, ಆಗಸ್ಟ್ 23ರಂದು ನಾನು ಗೋವಾಗೆ ತೆರಳಿದಾಗ, ಏನು ನಡೆದಿದೆ ಎಂದು ತಿಳಿದುಕೊಳ್ಳಲು ಸುಧೀರ್ಗೆ ಕರೆ ಮಾಡಿದೆ. ಈ ವೇಳೆ ಮಾತನಾಡಿದ ಆತ ನಾನು ಹೋಟೆಲ್ನಲ್ಲಿದ್ದೇನೆ ಮತ್ತು ಮೃತದೇಹ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇದೆ ಎಂದು ಹೇಳಿದ. ಶವವನ್ನು ನೋಡಬೇಕಿದ್ದರೆ ಅಲ್ಲಿಗೆ ಹೋಗಿ, ನನ್ನ ಜೊತೆ ಏನಾದರೂ ಕೆಲಸವಿದ್ದರೆ ಹೋಟೆಲ್ನಲ್ಲಿ ಭೇಟಿ ಮಾಡಿ ಎಂದು. ಶವವನ್ನು ನೋಡಿದ ನಂತರ ನಾನು ಪೊಲೀಸ್ ಠಾಣೆಗೆ ಹೋಗಿ, ಇನ್ಸ್ಪೆಕ್ಟರ್ ದೇಸಾಯಿ ನನ್ನೊಂದಿಗೆ ಸುಧೀರ್ ತಂಗಿದ್ದ ಹೋಟೆಲ್ಗೆ ಹೋದೆ. ಇನ್ಸ್ಪೆಕ್ಟರ್ ಸುಧೀರ್ ಜೊತೆ ಎಲ್ಲ ಮಾತುಕತೆಗಳನ್ನು ನಡೆಸಿದರು.
ಸಿನಿಮಾ ಚಿತ್ರೀಕರಣಕ್ಕೆ ಗೋವಾಗೆ ಹೋಗಿರುವುದಾಗಿ ಸುಧೀರ್ ಹೇಳಿದ್ದ. ಆದರೆ, ಅಲ್ಲಿ ಯಾವುದೇ ಕಲಾವಿದರಾಗಲಿ ಅಥವಾ ಸಿನಿಮಾ ಶೂಟಿಂಗ್ ಆಗಲಿ ನೋಡಲಿಲ್ಲ. ಸುಧೀರ್ ಮತ್ತು ಸುಖ್ವಿಂದರ್ ಬಿಟ್ಟು ಅಲ್ಲಿ ಯಾರು ಇರಲಿಲ್ಲ. ಸೊನಾಲಿಯನ್ನು ಇವರೇ ಕೊಂದಿದ್ದಾರೆ. ಹಣಕ್ಕಾಗಿ ಕೊಲೆ ಮಾಡಿದ್ದಾರೆ. ಕಳೆದ ವರ್ಷ ಸಾಂಗ್ವಾನ್ ಕಳ್ಳತನವನ್ನು ಮಾಡಿದ್ದ ಎಂದು ರಿಂಕು ಧಾಕಾ ಆರೋಪ ಮಾಡಿದ್ದಾರೆ. ಹಿಸಾರ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ 10 ಲಕ್ಷ ನಗದು, ಚಿನ್ನಾಭರಣ, ಪರವಾನಗಿ ಹೊಂದಿದ್ದ ರಿವಾಲ್ವರ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಹಿಂದೊಮ್ಮೆ ಸೊನಾಲಿ ದೂರು ನೀಡಿದ್ದರು.
ಸದ್ಯ ಆರೋಪಿಗಳ ಬಂಧನವಾಗಿ ವಿಚಾರಣೆ ನಡೆಯುತ್ತಿದೆ. ಆರಂಭದಲ್ಲಿ ಸೊನಾಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಂಬಲಾಗಿದ್ದ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಮುಂದೆ ಯಾವ ವಿಚಾರಗಳು ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
ಸೋನಾಲಿ ಸಾವಿನ ಕೇಸ್: ತಪ್ಪೊಪ್ಪಿಕೊಂಡ ಆರೋಪಿಗಳು, ಹೋಟೆಲ್ ಮಾಲೀಕ ಸೇರಿ ಇನ್ನಿಬ್ಬರ ಬಂಧನ
ರಾಕೇಶ್ ಬಗ್ಗೆ ವೀಕ್ಷಕರ ಈ ಊಹೆ ಸರಿಯಾಗಿದೆಯೇ? ಹಿಂದಿಯಂತೆ ಇಲ್ಲೂ ನಡೆಯುತ್ತಿದ್ದೀಯಾ ಈ ತಂತ್ರಗಾರಿಕೆ?
ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸು: ಮುಂದಿನ ನಾಲ್ಕು ದಿನ ಭಾರಿ ಮಳೆ ಬೀಳುವ ಸಾಧ್ಯತೆ