ನವದೆಹಲಿ: ಸಮಾಜದಲ್ಲಿ ಯುವಜನಾಂಗದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವೆಂದರೆ ಅದು ಸಿನಿಮಾ. ಒಂದು ಚಿತ್ರವೆಂದ ಮೇಲೆ ಅದರಲ್ಲಿ ಒಳಿತು ಮತ್ತು ಕೆಡಕು ಎರಡು ತೋರಿಸಲಾಗುತ್ತದೆ. ಆದರೆ, ಯಾವುದನ್ನು ಹೆಚ್ಚು ವಿಜೃಂಭಿಸಲಾಗುತ್ತದೆ ಅದು ಹೆಚ್ಚು ಪ್ರಭಾವ ಬೀರುತ್ತದೆ. ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಸಿನಿಮಾ, ಸಮಾಜದಲ್ಲಿ ದುಷ್ಕೃತ್ಯಗಳಿಗೆ ಪ್ರೇರಪಣೆ ನೀಡುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ನಟ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಗಲ್ಲಾ ಪಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಕತೆಯ ವಿಚಾರಕ್ಕೆ ಬಂದರೆ, ಹಲವರ ಕೆಂಗಣ್ಣಿಗು ಗುರಿಯಾಗಿದೆ. ಚಿತ್ರದಲ್ಲಿ ಕಳ್ಳಸಾಗಾಣೆಗಾರನನ್ನು ಹೀರೋ ಎಂಬಂತೆ ಬಿಂಬಿಸಲಾಗಿದೆ. ಇದೇ ಚಿತ್ರ ಇದೀಗ ಹುಡುಗನೊಬ್ಬನ ಸಾವಿಗೆ ಕಾರಣವಾಗುವ ಮೂಲಕ ಕುಖ್ಯಾತಿಯನ್ನು ಪಡೆದುಕೊಂಡಿದೆ.
ಪುಷ್ಪ ಸಿನಿಮಾ ನೋಡಿ ಪ್ರಭಾವಿತರಾದ ಬಾಲಕರು 24 ವರ್ಷದ ಸಿಬು ಎಂಬಾತನನ್ನು ಕೊಲೆ ಮಾಡಿರುವ ಘಟನೆ ವಾಯುವ್ಯ ದೆಹಲಿ ಜಹಾಂಗಿರ್ಪುರಿ ಏರಿಯಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪುಷ್ಪ ಸಿನಿಮಾದಿಂದ ಪ್ರೇರಿತರಾಗಿ ಗ್ಯಾಂಗ್ ಕಟ್ಟಿಕೊಂಡು ಈ ಕೃತ್ಯ ಎಸಗಿದ್ದಾರೆ.
ಫೇಮಸ್ ಆಗಲು ಕೊಲೆ ಮಾಡಿದ ವಿಡಿಯೋವನ್ನು ಆನ್ಲೈನ್ನಲ್ಲಿ ಹರಿಬಿಡಲು ಆರೋಪಿಗಳು ಬಯಸಿದ್ದರಂತೆ. ಮೃತ ಸಿಬು ಶಾಪ್ ಒಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆತನೊಂದಿಗೆ ಹುಡುಗರು ಜಗಳ ಆಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ.
ಆರೋಪಿಗಳು ತಮ್ಮಷ್ಟಕ್ಕೆ ತಾವೇ ತಮ್ಮ ಗ್ಯಾಂಗ್ ಅನ್ನು ಬದ್ನಾಮ್ ಗ್ಯಾಂಗ್ ಎಂದು ಕರೆದುಕೊಂಡಿದ್ದಾರೆ. ಅಲ್ಲದೆ, ಪುಷ್ಪ ಚಿತ್ರದ ನಾಯಕನ ಪಾತ್ರಧಾರಿಯಂತೆ ವರ್ತಿಸುತ್ತಿದ್ದರು. ಕೊಲೆ ಮಾಡಿದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ನಿರ್ಧರಿಸಿದ್ದರು ಎಂದು ವಾಯುವ್ಯ ದೆಹಲಿಯ ಡಿಸಿಪಿ ಉಷಾ ರಂಗನಾನಿ ತಿಳಿಸಿದ್ದಾರೆ.
ಹೊಟ್ಟೆಗೆ ಚೂರಿ ಇರಿದ ಸ್ಥಿತಿಯಲ್ಲಿ ಯುವಕ (ಶಿಬು) ನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಬುಧವಾರ ಬಾಬು ಜಗಜೀವನ ರಾಮ್ ಮೆಮೊರಿಯಲ್ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆದರೆ ಶಿಬು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಸಂತ್ರಸ್ತ ಮತ್ತು ಆರೋಪಿಗಳ ನಡುವೆ ಜಗಳ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಪೋಲೀಸರ ಪ್ರಕಾರ, “ಪುಷ್ಪ” ಮತ್ತು “ಭೌಕಾಲ” ನಂತಹ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ತೋರಿಸಿರುವಂತೆ ದೊಡ್ಡ ದರೋಡೆಕೋರರ ಜೀವನಶೈಲಿಯಿಂದ ಪ್ರಭಾವಿತರಾಗಿದ್ದೇವೆ ಮತ್ತು ಅವರಂತೆ ಆಗಲು ಬಯಸುತ್ತೇವೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪರಾಧದ ವೀಡಿಯೊವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಮತ್ತು ಕೊಲೆಗೆ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
VIDEO: ಇನ್ಮುಂದೆ ನೀವು ಕೇಸ್ ಹಾಕಲ್ಲ ಅಂದ್ರೆ ಮಾತ್ರ ಕೆಳಗಿಳೀತೇನೆ… ಟವರ್ ಏರಿ ಪೊಲೀಸರಿಗೆ ಸವಾಲ್ ಹಾಕಿದ ಕುಡುಕ!
ಒಬ್ಬನ ಹಿಂದೆ ಬಿದ್ದ 200 ಪೊಲೀಸರು! ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಈತ ಯಾರು?