ಉಡುಪಿ: ಮಲ್ಪೆ ಬೀಚ್ಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಐವರು ಯುವಕರ ಪೈಕಿ ನಾಗೇಂದ್ರ (21) ಎಂಬಾತ ಸಮುದ್ರದ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಮಧ್ಯಾಹ್ನ 2.15ರ ಸುಮಾರಿಗೆ ಯುವಕರು ಸಮುದ್ರಕ್ಕೆ ಇಳಿದು ಆಟವಾಡುತ್ತಿದ್ದರು. ಈ ವೇಳೆ ನಾಗೇಂದ್ರ ಎಂಬಾತ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗೇಳುತ್ತಿದ್ದ. ಆತನನ್ನು ಮಲ್ಪೆಯ ಮುಳುಗುತಜ್ಞ ಈಶ್ವರ್ ಮಲ್ಪೆ ತಕ್ಷಣ ಸಮುದ್ರಕ್ಕಿಳಿದು ಮೇಲಕ್ಕೆ ಎಳೆದು ತಂದರು. ಬಳಿಕ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ದಿನದ ಹಿಂದಷ್ಟೇ ಮಲ್ಪೆ ಬೀಚಿಗೆ ಪ್ರವಾಸಕ್ಕೆ ಬಂದಿದ್ದ ಹಾಸನ ಜಿಲ್ಲೆಯ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದ.