ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಆಯೋಗ(ಎನ್ಐಎ) ಮಂಗಳೂರಿನ ಪಿಎಫ್ಐ, ಎಸ್ಡಿಪಿಐ ಕಚೇರಿ ಹಾಗೂ ಮುಖಂಡರ ಮನೆಗಳ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಪಿಎಫ್ಐ ಮತ್ತು ಎಸ್ಡಿಪಿಐ ಕಚೇರಿ ಮೇಲೆ ಮುಂಜಾನೆ ಸುಮಾರು 3.30ರ ವೇಳೆ ದಾಳಿ ನಡೆದಿದೆ. ದಾಳಿಗೂ ಮುನ್ನ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ನಂತರ ಎನ್ಐಎ ದಾಳಿ ಮಾಡಿದ್ದು, ಕಡತಗಳ ಪರಿಶೀಲನೆ ಸೇರಿದಂತೆ ತನಿಖೆಯನ್ನು ಚುರುಕುಗೊಳಿಸಿದೆ.
ಇದರ ನಡುವೆ ಎನ್ಐಎ ದಾಳಿಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಅರೆಮೀಸಲು ಪಡೆ ಕೂಡ ಭಾರೀ ಕಟ್ಟೆಚ್ಚರ ವಹಿಸಿದೆ.
ಪಿಎಫ್ಐ, ಎಸ್ ಡಿಪಿಐ ಮುಖಂಡರ ಮನೆ ಮೇಲೆಯು ದಾಳಿ ನಡೆದಿದೆ. ಪಿಎಫ್ಐ ನಾಯಕರಾದ ಶರೀಫ್ ಬಜ್ಪೆ, ಅಶ್ರಫ್ ಜೋಕಟ್ಟೆ, ಮೊಯಿದಿನ್ ಹಳೆಯಂಗಡಿ, ನವಾಝ್ ಕಾವೂರು ಹಾಗೂ ಖಾದರ್ ಕುಳಾಯಿ ಮನೆ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಎನ್ಐಎ ದಾಳಿ ಮಾಡಿದೆ.
ಈ ಹಿಂದೆ ಅಂದರೆ, ಸೆ.6ರಂದು ಇದೇ ಎನ್ಐಎ ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿತ್ತು. ಒಟ್ಟು 32 ಕಡೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿ, ಪ್ರವೀಣ್ ಹತ್ಯೆ ಮಾಡಿದ ಆರೋಪಿಗಳು ಮತ್ತು ಅವರಿಗೆ ಸಹಕಾರ ನೀಡಿದವರನ್ನು ಎನ್ಐಎ ವಿಚಾರಣೆ ಮಾಡಿತ್ತು.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ಪ್ರವೀಣ್ ನೆಟ್ಟಾರ್ ಕೊಲೆಯಾಗಿತ್ತು. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮೃತ ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. (ದಿಗ್ವಿಜಯ ನ್ಯೂಸ್)
ದೂರು ನೀಡಲು ಹೋದ ದೂರುದಾರನ ಮೇಲೆಯೇ ವಿಶ್ವನಾಥಪುರ ಠಾಣಾ ಪೊಲೀಸರಿಂದ ದೌರ್ಜನ್ಯ!?
ಪ್ರೋ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಲಿದೆ ಕಬಡ್ಡಿ ಕಲರವ