ತಿರುಮಲ: ದಿನ ನಿತ್ಯದ ಊಟಕ್ಕಾಗಿ ಭಿಕ್ಷೆ ಬೇಡುವುದೇ ಆತನ ಕೆಲಸ. ಆತನನ್ನು ನೋಡಿದವರು ಕಡುಬಡವನೆಂದು ಹಣ ನೀಡಿ ಅಯ್ಯೋ ಪಾಪ ಅಂದುಕೊಂಡವರೇ ಹೆಚ್ಚು. ಆದರೆ, ಅದೇ ಭಿಕ್ಷುಕ ಇಂದು ಲಕ್ಷಾಧಿಪತಿ ಅಂತಾ ಗೊತ್ತಾದಾಗ ಯಾರಾದರೂ ಸರಿ ಹುಬ್ಬೇರಿಸದೇ ಇರಲಾರರು. ಹೌದು, ಅಂಥದ್ದೇ ಒಂದು ಘಟನೆ ತಿರುಪತಿಯಲ್ಲಿ ನಡೆದಿದೆ.
ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಸನ್ನಿಧಿ ಇರುವ ತಿರುಪತಿಯಲ್ಲಿ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಭಿಕ್ಷುಕನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈತ ತಿರುಪತಿಯ ಶೇಷಾಚಲ ನಗರದ ನಿವಾಸಿ. ತಿರುಪತಿಗೆ ಬರುತ್ತಿದ್ದ ವಿಐಪಿಗಳ ಬಳಿ ಭಿಕ್ಷೆ ಬೇಡುತ್ತಿದ್ದ. ಈತನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯನ್ನು ಮಂಜೂರು ಮಾಡಲಾಗಿತ್ತು.
ಆದಾಗ್ಯೂ ಶ್ರೀನಿವಾಸನ್ ಅನಾರೋಗ್ಯದಿಂದಾಗಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಆತನ ಯಾವುದೇ ಕುಟುಂಬ ಸದಸ್ಯರು ಇಲ್ಲದಿರುವುದಿಂದ ಟಿಟಿಡಿ ಅಧಿಕಾರಿಗಳು ನಿನ್ನೆ ಭಿಕ್ಷುಕನ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಎರಡು ಟ್ರಕ್ ಬಾಕ್ಸ್ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಸಹ ಪತ್ತೆಯಾಗಿವೆ.
ಕಂತೆ ನೋಟುಗಳನ್ನು ಎಣಿಸಿದಾಗ ಅದರಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣವಿತ್ತು. ಹಣವನ್ನು ಟಿಟಿಡಿ 5 ಸಿಬ್ಬಂದಿ ಎಣಿಸಿದರು. ಅಂದಹಾಗೆ ಭಿಕ್ಷುಕ ಶ್ರೀನಿವಾಸನ್, ಅನೇಕ ವರ್ಷಗಳವರೆಗೆ ತಿರುಮಲ ಬೆಟ್ಟದಲ್ಲಿ ವಾಸವಿದ್ದ. ಆದರೆ, ಟಿಟಿಡಿಯ ಯೋಜನೆಯಂತೆ ಭಿಕ್ಷುಕನನ್ನು ಬಲವಂತವಾಗಿ ಹೊರದೂಡಲಾಗಿತ್ತು. ಅಲ್ಲದೆ, ಆತನನ್ನು ತಿರುಪತಿ ವಲಸಿಗ ಎಂದು ಶೇಷಾಚಲ ಕಾಲನಿಯಲ್ಲಿ ಮನೆಯೊಂದನ್ನು ಕೊಡಲಾಗಿತ್ತು. ಅಲ್ಲಿಯೇ ಉಳಿದಿದ್ದ ಶ್ರೀನಿವಾಸ್ ಅನಾರೋಗ್ಯಕ್ಕೀಡಾಗಿ ಕಳೆದ ವರ್ಷವೇ ಮೃತಪಟ್ಟಿದ್ದಾನೆ.
ಯಾತ್ರಿಯಾಗಿ ತಿರುಮಲ ಬೆಟ್ಟಕ್ಕೆ ಬಂದಿದ್ದ ಶ್ರೀನಿವಾಸನ್ ಭಿಕ್ಷುಕನಾಗಿ ಇಲ್ಲಿಯೇ ಉಳಿದುಕೊಂಡಿದ್ದ. ಆತನ ಮನೆಯಲ್ಲಿ ಕೆಲ 500 ಮತ್ತು 1000 ಮುಖಬೆಲೆಯ ರದ್ದಾದ ನೋಟುಗಳು ಸಹ ಇವೆ. ಅಲ್ಲದೆ, 2000 ರೂಪಾಯಿ ನೋಟುಗಳು ಸಹ ಸಾಕಷ್ಟಿವೆ. (ಏಜೆನ್ಸೀಸ್)
ಕೂಡ್ಲಿ-ಶೃಂಗೇರಿ ಮಠದ ಪೀಠಾಧಿಪತಿ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ ನಿಧನ