ನವದೆಹಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ವಾಶ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದ ಪ್ರವಾಸಿ ಟೀಮ್ ಇಂಡಿಯಾಗೆ ಈ ಟೂರ್ನಿ ಒಂದು ನೋವಿನ ಅನುಭವವಾಗಿದೆ. ಇನ್ನೊಂದೆಡೆ ಈ ಟೂರ್ನಿಯಿಂದ ಆಫ್ರಿಕಾ ತಂಡದಲ್ಲಿ ಕೇಶವ್ ಮಹಾರಾಜ್, ಮಾರ್ಕೋ ಜನಸೇನ್ ಹೆಸರು ದೊಡ್ಡದಾಗಿ ಕೇಳಿಬರುತ್ತಿದೆ.
ಈಗಾಗಲೇ ಹಶೀಮ್ ಆಮ್ಲ, ಎಬಿ ಡಿವಿಲಿಯರ್ಸ್, ಫಾಫ್ ಡುಪ್ಲೆಸಿಸ್ ಮತ್ತು ಡೇಲ್ ಸ್ಟೇನ್ನಂತಹ ಅಗ್ರಗಣ್ಯ ಆಟಗಾರರು ವಿದಾಯ ಹೇಳಿರುವುದು ಆಫ್ರಿಕಾ ತಂಡಕ್ಕೆ ಭಾರೀ ನಷ್ಟವಾಗಿದೆ. ಈ ಮಹಾನ್ ಆಟಗಾರರ ಸ್ಥಾನವನ್ನು ಮುಂದೆ ಯಾರು ತುಂಬಲಿದ್ದಾರೆ ಎಂಬ ನೋವು ತಂಡವನ್ನು ಕಾಡುತ್ತಿತ್ತು. ಆದರೆ, ಪ್ರವಾಸಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ನಿರ್ವಹಣೆ ತೋರಿದ ರೀತಿಯನ್ನು ನೋಡಿದರೆ ಇನ್ಮುಂದೆ ಆ ನೋವು ತಂಡಕ್ಕೆ ಕಾಡುವುದಿಲ್ಲ ಎಂಬ ಭರವಸೆ ದೊರೆತಿದೆ.
ಅದರಲ್ಲೂ ಹೊಸ ಆಟಗಾರರಿಗೆ ಈ ಅದ್ಭುತ ಗೆಲುವು ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕಿದೆ. ಹೀಗಾಗಿ ಅನೇಕ ಆಟಗಾರರು ಈ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಸ್ಪಿನ್ನರ್ ಕೇಶವ್ ಮಹಾರಾಜ್ ಸಂಭ್ರಮದ ಪೋಸ್ಟ್ ಇದೀಗ ಎಲ್ಲರ ಗಮನ ಸೆಳೆದಿದೆ.
ಏಕದಿನ ಸರಣಿ ಗೆದ್ದ ಬಳಿಕ ಈ ಟೂರ್ನಿಯಲ್ಲಿ ಎರಡು ಬಾರಿ ವಿರಾಟ್ ಕೊಹ್ಲಿ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಮಹಾರಾಜ್, ತಂಡದ ವಿಜಯೋತ್ಸವ ಫೋಟೋವನ್ನು ಪೋಸ್ಟ್ ಮಾಡಿ, ಬಹಳ ಕುತೂಹಲಕಾರಿ ಅಡಿಬರಹವನ್ನು ಬರೆದಿದ್ದಾರೆ. ಇದು ಎಂತಹ ಅದ್ಭುತ ಸರಣಿಯಾಗಿದೆ ಎಂದು ತಂಡದ ಬಗ್ಗೆ ಹೆಚ್ಚು ಹೆಮ್ಮೆಪಡಲಾಗದು. ಏಕೆಂದರೆ, ಮುಂದಿನ ಪಂದ್ಯಕ್ಕೆ ತಯಾರಿ ಆಗಬೇಕಿದೆ ಮತ್ತು ತಯಾರಿ ಆಗಲು ಎಷ್ಟು ಸಮಯ ಇದೆ ಎಂಬುದೇ ಮುಖ್ಯ ಎಂದು ಅಡಿಬರಹ ನೀಡಿರುವ ಕೇಶವ್ ಮಹಾರಾಜ್ ಕೊನೆಯಲ್ಲಿ ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ.
ಭಾರತೀಯ ಮೂಲದ ಕೇಶವ್ ಮಹಾರಾಜ್, ಈ ಏಕದಿನ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಕಠಿಣವಾಗಿ ಪರಿಣಮಿಸಿದರು. ಎರಡು ಬಾರಿ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದಲ್ಲದೆ, ರನ್ ವೇಗಕ್ಕೂ ಕಡಿವಾಣ ಹಾಕುವ ಮೂಲಕ ಭಾರತೀಯ ಬ್ಯಾಟ್ಸ್ಮನ್ಗಳನ್ನು ಚೆನ್ನಾಗಿ ನಿರ್ವಹಿಸಿದ್ದು, ಆಫ್ರಿಕಾ ತಂಡದಲ್ಲಿ ಶ್ರೇಷ್ಠ ಆಟಗಾರನೆಂದ ಹೆಸರು ಗಳಿಸಿದ್ದಾರೆ. (ಏಜೆನ್ಸೀಸ್)
ನಿಮ್ಮ ಮದ್ವೆ ಯಾವಾಗ? ನಟಿ ಸೋನಾಕ್ಷಿ ಸಿನ್ಹಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಗರಂ
ಮನೆಯಿಂದ ತಂದೆಯನ್ನು ಹೊರಹಾಕಿದ ಮಗನಿಗೆ ತಕ್ಕಶಾಸ್ತಿ: ಮಗನನ್ನೇ ಹೊರಹಾಕುವಂತೆ ಕೋರ್ಟ್ ಆದೇಶ
VIDEO| ಕಾರು ಚಾಲಕನಿಂದ ಅಪಾಯಕಾರಿ ಯೂಟರ್ನ್: ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ…