ಮೆಕ್ಸಿಕೋ: ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಮಹಿಳೆಯನ್ನು ಆಕೆಯ ಬರ್ತಡೇ ದಿನದಂದೇ ಎರಡು ಡ್ರಗ್ ಪೆಡ್ಲಿಂಗ್ ಗ್ಯಾಂಗ್ಸ್ ಬರ್ಬರವಾಗಿ ಹತ್ಯೆ ಮಾಡಿವೆ. ಈ ಘಟನೆ ಮೆಕ್ಸಿಕೋದ ತುಲುಮ್ನಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಬರ್ತಡೇ ಹಿನ್ನೆಲೆಯಲ್ಲಿ ಪಾರ್ಟಿಗೆಂದು ರೆಸ್ಟೋರೆಂಟ್ಗೆ ತೆರಳಿದ್ದ ಸಮಯದಲ್ಲಿ ಭೀಕರ ಹತ್ಯೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮೃತಳನ್ನು ಅಂಜಲಿ ರಯೋಟ್ ಎಂದು ಗುರುತಿಸಲಾಗಿದೆ. ಟೆಕ್ಕಿ ಹಾಗೂ ಟ್ರ್ಯಾವೆಲ್ ಬ್ಲಾಗರ್ ಆಗಿರುವ ಅಂಜಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ಎಂಬಲ್ಲಿ ನೆಲೆಸಿದ್ದರು. ಜರ್ಮನ್ ಪ್ರವಾಸಿಗ ಜೆನ್ನಿಫರ್ ಹೆಂಜೋಲ್ಡ್ ಜತೆಯಲ್ಲಿ ಅಂಜಲಿಯನ್ನು ಡ್ರಗ್ ಪೆಡ್ಲಿಂಗ್ ಗ್ಯಾಂಗ್ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಿದೆ.
ಟ್ರ್ಯಾವೆಲ್ ಬ್ಲಾಗರ್ ಆಗಿದ್ದ ಅಂಜಲಿ ಅ.22ರಂದು ಆಕೆಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಮವಾರವೇ ಕ್ಯಾಲಿಫೋರ್ನಿಯಾದ ತುಲಮ್ನಲ್ಲಿರುವ ರೆಸ್ಟೋರೆಂಟ್ಗೆ ಆಗಮಿಸಿದ್ದರು. ಆಕೆಯ ಇನ್ಸ್ಟಾಗ್ರಾಂ ಮಾಹಿತಿ ಪ್ರಕಾರ ಆಕೆ ಹಿಮಾಚಲ ಪ್ರದೇಶದ ಟ್ರ್ಯಾವೆಲ್ ಬ್ಲಾಗರ್ ಹಾಗೂ ಪ್ರಸ್ತುತ ಸ್ಯಾನ್ ಜೋಸ್ನಲ್ಲಿ ನೆಲೆಸಿರುವುದಾಗಿ ಬರೆದುಕೊಂಡಿದ್ದಾರೆ. ಅಂಜಲಿ ಅವರು ಜುಲೈನಿಂದ ಲಿಂಕ್ಡ್ಇನ್ನಲ್ಲಿ ವಿಶ್ವಾಸಾರ್ಹ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಯಾಹೂವಿನಲ್ಲಿ ಕೆಲಸ ಮಾಡಿದ್ದರು.
ಬುಧವಾರ ರಾತ್ರಿ 10.30 ರ ಸುಮಾರಿಗೆ, ಅಂಜಲಿ ಮತ್ತು ಇತರ ನಾಲ್ವರು ಪ್ರವಾಸಿಗರು ಲಾ ಮಲ್ಕ್ವೆರಿಡಾ ರೆಸ್ಟೋರೆಂಟ್ನ ಟೆರೇಸ್ನಲ್ಲಿ ಊಟ ಮಾಡುತ್ತಿದ್ದಾಗ, ರೈಫಲ್ಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ನಾಲ್ವರು, ರೆಸ್ಟೋರೆಂಟ್ ಆವರಣದ ಪಕ್ಕದ ಮೇಜಿನ ಮೇಲೆ ಗುಂಡು ಹಾರಿಸಿದರು ಎಂದು ಸ್ಪ್ಯಾನಿಷ್ ಪತ್ರಿಕೆ ಎಲ್ ಪಾಯಿಸ್ ವರದಿ ಮಾಡಿದೆ.
ದಾಳಿಯಲ್ಲಿ ಬುಲೆಟ್ಗಳು ಅಂಜಲಿ ಮತ್ತು ಜೆನ್ನಿಫರ್ಗೂ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಜರ್ಮನಿ ಮತ್ತು ನೆದರ್ಲೆಂಡಿನ ಮೂವರು ಗಾಯಗೊಂಡಿದ್ದಾರೆ. ಡ್ರಗ್ ಪೆಡ್ಲರ್ ಗ್ಯಾಂಗ್ಗಳ ನಡುವೆ ನಡೆದ ಪರಸ್ಪರ ದಾಳಿಯಲ್ಲಿ ಅಮಾಯಕರ ಜೀವ ಹೋಗಿದೆ.
ಆ ಪ್ರದೇಶದಲ್ಲಿ ಎರಡು ಡ್ರಗ್ ಪೆಡ್ಲಿಂಗ್ ಗ್ಯಾಂಗ್ಗಳು ಸಕ್ರೀಯವಾಗಿವೆ. ಅಲ್ಲದೆ, ಮೆಕ್ಸಿಕನ್ ರಾಜ್ಯದಲ್ಲಿ ಹಲವಾರು ಡ್ರಗ್ ಕಾರ್ಟೆಲ್ಗಳು ಸಹ ಕಾರ್ಯನಿರ್ವಹಿಸುತ್ತಿವೆ. ಇದು ಲಾಭದಾಯಕ ಚಿಲ್ಲರೆ ಔಷಧ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ ಮತ್ತು ಔಷಧ ಸಾಗಣೆಯ ಹಾಟ್ ಸ್ಪಾಟ್ ಆಗಿದ್ದು, ಗುಂಡಿನ ದಾಳಿ ಸಾಮಾನ್ಯವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಆಘಾತಗೊಂಡ ಕುಟುಂಬ
ಅಂಜಲಿಯ ಸಾವಿನ ಬಗ್ಗೆ ತಿಳಿಯುತ್ತಿದ್ದಂತೆ ಹಿಮಾಚಲ ಪ್ರದೇಶದಲ್ಲಿ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ಆಕ್ರಂದನ ಮುಗಿಲು ಮುಟ್ಟಿದ್ದು, ಆಕೆಯ ಮೃತದೇಹವನ್ನು ಮರಳಿ ತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆಕೆಯ ಸಹೋದರ ಆಶಿಶ್ ತುಳುಮ್ ಸ್ಥಳೀಯ ಜನಪ್ರತಿನಿಧಿಯನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ ಕರೊನಾ ಸಾಂಕ್ರಾಮಿಕ ಪ್ರಾರಂಭವಾದಾಗ ಅಂಜಲಿ, ಕುಟುಂಬದೊಂದಿಗೆ ಸೋಲನ್ನಲ್ಲಿ ಮೂರು-ನಾಲ್ಕು ತಿಂಗಳುಗಳನ್ನು ಕಳೆದಿದ್ದಳು ಎಂದು ಆಕೆಯ ತಂದೆ ಕೆ.ಡಿ ರಯಾಟ್ ಹೇಳಿದರು.
ಅಂಜಲಿ ಮತ್ತು ಅವರ ಪತಿ ಉತ್ಕರ್ಷ್ ಶ್ರೀವಾಸ್ತವ್ ಅಕ್ಟೋಬರ್ 22 ರಂದು ಸ್ಯಾನ್ ಜೋಸ್ನಿಂದ ತನ್ನ 30 ನೇ ಹುಟ್ಟುಹಬ್ಬವನ್ನು ಆಚರಿಸಲು ಮೆಕ್ಸಿಕೊಕ್ಕೆ ಹೋಗಿದ್ದರು ಎಂದು ಆಕೆಯ ತಂದೆ ಹೇಳಿದ್ದಾರೆ. ಘಟನೆಯ ಬಗ್ಗೆ ಪ್ರಸ್ತುತ ಚಿಕಾಗೋದಲ್ಲಿ ವಾಸಿಸುತ್ತಿರುವ ಅಂಜಲಿ ಸಹೋದರ ಆಶಿಶ್ಗೆ, ಉತ್ಕರ್ಷ್ ಮಾಹಿತಿ ನೀಡಿದ್ದಾರೆ. ಆಶಿಶ್, ಅಕ್ಟೋಬರ್ 21 ರಂದು ತನ್ನ ತಂದೆಗೆ ಕರೆ ಮಾಡಿ ದುರಂತದ ಬಗ್ಗೆ ತಿಳಿಸಿದ್ದಾರೆ. (ಏಜೆನ್ಸೀಸ್)
ಕಥೆ, ಪಾತ್ರ, ನಟನೆ, ಯಶಸ್ಸಿನ ಬಗ್ಗೆ…: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್ನಲ್ಲಿ ಸುದೀಪ್
ರಾಜಧಾನಿಯಲ್ಲಿ ಶೀಘ್ರ ಸ್ವದೇಶಿ ಮೆಟ್ರೋ ರೈಲು ಸಂಚಾರ; ಬಿಇಎಂಎಲ್ ತಯಾರಿಸಿದ 7 ರೋಲಿಂಗ್ ಕೋಚ್
ಆಯಸ್ಸು 2 ವರ್ಷ ಕಡಿತ!; ಕರೊನಾ ಪರಿಣಾಮ ನಿರೀಕ್ಷಿತ ಜೀವಿತಾವಧಿ ಇಳಿಕೆ, ಅಧ್ಯಯನ ವರದಿ..