ತೋಡುಪುಳ: ಮದವೇರಿದ ಕಾಡಾನೆ ದಾಳಿಯನ್ನು ಎದುರಿಸಿದ್ದ ಮಹಿಳೆ ಮತ್ತು ಆಕೆಯ ಮಗನಿಗೆ ಕೇರಳ ರಾಜ್ಯ ಸರ್ಕಾರ ಹೊಸ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದೆ. ಕಾಡಾನೆಯು ಮನೆಯನ್ನು ಧ್ವಂಸಗೊಳಿಸಿದ ನಂತರ ವಿಮಲಾ ಮತ್ತು ಅವರ ಮಗ ಸನಲ್ ಬಂಡೆಯ ಮೇಲೆ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇದೀಗ ಸರ್ಕಾರ ಹೊಸ ಮನೆ ನಿರ್ಮಾಣ ಮಾಡಿಕೊಟ್ಟಿದ್ದು, ಸಂಕಷ್ಟ ದೂರವಾಗಿದೆ.
ವಿಮಲಾ ಅವರ ಕರುಣಾಜನಕ ಕಥೆಯು ಸುದ್ದಿಯಾಗುತ್ತಿದ್ದಂತೆ, ರಾಜ್ಯ ಸರ್ಕಾರವು ಜೀವನ್ ಮಿಷನ್ ಯೋಜನೆಯಡಿ ಹೊಸ ಮನೆಯನ್ನು ನಿರ್ಮಿಸಿದೆ. ವಿಮಲಾ ಅವರಿಗೆ ಶೀಘ್ರವೇ ಮನೆಯ ಕೀ ಹಸ್ತಾಂತರಿಸಲಾಗುವುದು ಎಂದು ಸ್ಥಳೀಯ ಸ್ವಯಂ ಆಡಳಿತ ಮತ್ತು ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಹಿತಿ ನೀಡಿದ್ದಾರೆ.
ವಿಮಲಾ ಅವರ ಒಡೆತನದ ಜಮೀನು ಕಾಡಾನೆ ದಾಳಿಗೆ ತುತ್ತಾಗಿತ್ತು. ಇದನ್ನು ಗಮನಿಸಿದ ಸರ್ಕಾರ ಆಕೆಗೆ ಹೊಸ ಜಮೀನು ಮಂಜೂರು ಮಾಡಿ ಮನೆ ನಿರ್ಮಿಸಿದೆ. ಇದಕ್ಕೂ ಮುನ್ನ ವಿಮಲಾ ಮತ್ತು ಅವರ ಮಗ ಟಾರ್ಪಾಲಿನ್ ಶೀಟ್ಗಳಿಂದ ಮಾಡಿದ ತಾತ್ಕಾಲಿಕ ಶೆಡ್ಗೆ ಸ್ಥಳಾಂತರವಾಗಿದ್ದರು. ಅಲ್ಲದೆ, ಸಮಸ್ಯೆಗಳ ನಡುವೆಯೇ ವಿಮಲಾ ಅವರ ಮಗನ ವೈದ್ಯಕೀಯ ಚಿಕಿತ್ಸೆಗೂ ಅಡ್ಡಿಯಾಗಿತ್ತು.
ವಿಮಲಾ ಅವರ ಸಂಕಷ್ಟವನ್ನು ಮಾಧ್ಯಮಗಳು ವರದಿ ಮಾಡಿದ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸಚಿವರು ಆದೇಶಿಸಿದ್ದರು. ನಂತರ ಪಂಚಾಯಿತಿ ನಿರ್ದೇಶಕರು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿ ತಹಸೀಲ್ದಾರ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ವಿಮಲಾ ಅವರ ಹೊಸ ಮನೆಗೆ ಜಮೀನು ಗುರುತಿಸಿ, ಮನೆ ಸಿದ್ಧವಾಗುವವರೆಗೆ ವಿಮಲಾ ಮತ್ತು ಅವರ ಮಗನನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಮನೆ ನಿರ್ಮಾಣವಾಗಿದ್ದು, ಸಂಕಷ್ಟ ದೂರವಾಗಿದೆ. (ಏಜೆನ್ಸೀಸ್)
ಮಾಜಿ ಪತಿಯ ಈ ಕೃತ್ಯದಿಂದ ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದೆ… ಪೂನಂ ಬಿಚ್ಚಿಟ್ಟ ರಹಸ್ಯವಿದು!
ಮಹಿಳೆಯ ಸರ ಕಸಿದು ಪರಾರಿಯಾಗುವಾಗ ಅಪಘಾತ: ಓರ್ವ ಖದೀಮ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
ಉಳುಮೆಗೆ ಹೊರಟ ರೈತನಿಗೆ ಪೆಟ್ರೋಲ್ ಸುರಿದು ಬೆಂಕಿ: ದಾಯಾದಿಯಿಂದ ಅಮಾನವೀಯ ಕೃತ್ಯ