ವಿಜಯವಾಡ: ಮಹಮಾರಿ ಕರೊನಾದಂತಹ ಕಠಿಣ ಸಮಯದಲ್ಲೂ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಇದೀಗ ಮತ್ತೊಂದು ಒಳ್ಳೆ ಸುದ್ದಿಯನ್ನು ತಮ್ಮ ರಾಜ್ಯದ ಜನರಿಗೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕರೊನಾ ರೋಗಿಗಳಿಗೆ ಯಾವುದೇ ಆಸ್ಪತ್ರೆಗಳು ಬೆಡ್ ಖಾಲಿ ಇಲ್ಲ ವಾಪಸ್ ಕಳುಹಿಸಬಾರದು ಹಾಗೂ ಕರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಸಿಎಂ ಜಗನ್ ಖಡಕ್ ಆದೇಶ ಹೊರಡಿಸಿದ್ದಾರೆ.
ಇದೀಗ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಉದ್ಯೋಗಿಗಳಿಗೆ ನೆರವಾಗಲಿ ಎಂದು ಮಹತ್ವದ ಯೋಜನೆ ಜಾರಿ ತಂದಿರುವ ಜಗನ್, 2023ರ ಒಳಗೆ ರಾಜ್ಯದ ಎಲ್ಲ ಗ್ರಾಮಗಳಿಗೆ ವೇಗವಾಗಿ ಕಾರ್ಯನಿರ್ವಹಿಸುವ ಅನ್ಲಿಮಿಟೆಡ್ ಇಂಟರ್ನೆಟ್ ಸಂಪರ್ಕವನ್ನು ಉಚಿತವಾಗಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇದರೊಂದಿಗೆ ಡಿಜಿಟಲ್ ಲೈಬ್ರರಿ ಸೌಲಭ್ಯ ನೀಡುವಂತೆಯೂ ಸೂಚಿಸಿದ್ದು, ಎಲ್ಲ ಕೆಲಸಗಳು ನಿಗದಿತ ಸಮಯದವರೆಗೆ ಪೂರ್ಣಗೊಳ್ಳಬೇಕೆಂದು ಹೇಳಿದ್ದಾರೆ.
ಗ್ರಾಮಗಳಲ್ಲಿ ಇಂಟರ್ನೆಟ್ ಸಮಸ್ಯೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಗನ್ ಈ ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ. ಇನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡುವಂತೆಯೂ ಜಗನ್ ಹೇಳಿದ್ದಾರೆ. 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತದೆ ಮತ್ತು ಲ್ಯಾಪ್ಟಾಪ್ ಸರ್ವೀಸ್ ಸಹ ಉಚಿತವಾಗಿ ದೊರೆಯಲಿದೆ.
ಲ್ಯಾಪ್ಟಾಪ್ ಹಾನಿಯಾದರೆ ಅದನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೈಯಲ್ಲಿ ಕೊಡಬೇಕು. ಅದನ್ನು ತೆಗೆದುಕೊಂಡ ಪಂಚಾಯಿತಿ ಸಿಬ್ಬಂದಿ ಸರ್ವೀಸ್ ಕೇಂದ್ರದಲ್ಲಿ ದುರಸ್ಥಿ ಮಾಡಿಸಿ ಹಿಂದಿರುಗಿಸಬೇಕು. ಒಂದು ವಾರದ ಒಳಗೆ ಮರಳಿಸಬೇಕು. ಪ್ರತಿಯೊಂದು ಕಂದಾಯ ವಲಯದಲ್ಲಿ ಒಂದೊಂದು ಸರ್ವೀಸ್ ಕೇಂದ್ರಗಳು ಇರಬೇಕು ಎಂದು ಸಿಎಂ ಜಗನ್ ನಿರ್ದೇಶಿಸಿದ್ದಾರೆ.
ಇಲ್ಲಿಯವರೆಗೆ 14,671 ಕಿ.ಮೀ ಏರಿಯಲ್ ಕೇಬಲ್ ಅನ್ನು 307 ವಲಯಗಳ 3,642 ಗ್ರಾಮಗಳಿಗೆ ಅಳವಡಿಸಲಾಗಿದೆ ಎಂದು ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಆಯುಕ್ತರಾದ ಎಂ. ಗಿರಿಜಾಶಂಕರ್ ಅವರು ಸಿಎಂ ಜಗನ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಾಕಿ ಉಳಿದ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಿಎಂ ಜಗನ್ ಸೂಚಿಸಿದ್ದಾರೆ. (ಏಜೆನ್ಸೀಸ್)
ನೋಮ್ಯಾಡ್ ಲ್ಯಾಂಡ್ಗೆ ದ ಆಸ್ಕರ್ಸ್; ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ