ಬೆಂಗಳೂರು: ಕಳೆದ ಒಂದು ತಿಂಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರದಿಂದ ಪ್ರವಾಹ ಸೃಷ್ಟಿಯಾಗಿ ಜನರು ಸಾಕಷ್ಟು ಸಂಕಷ್ಟ ಅನುಭವಿಸಿರು. ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಯಿತು. ಅನೇಕ ಕಾರುಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿ ಕೆಟ್ಟು ಹೋದವು. ಅನೇಕರಿಗೆ ತಮ್ಮ ಕಾರುಗಳದ್ದೇ ಚಿಂತೆಯಾಗಿತ್ತು. ವರುಣ ಅಬ್ಬರ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಅಂದರೆ, ನಾವು ಈಗ ಹೇಳ ಹೊರಟಿರುವ ಕತೆಯನ್ನು ಓದಿದ್ರೆ ನಿಮಗೆ ಗೊತ್ತಾಗುತ್ತದೆ.
ವರುಣನ ಅಬ್ಬರದಿಂದ ಹಾನಿಗೀಡಾದ ಕಾರನ್ನು ರಿಪೇರಿಗೆಂದು ಕಾರು ಸರ್ವೀಸ್ ಕೇಂದ್ರಕ್ಕೆ ಬಿಟ್ಟ ಮಾಲೀಕನೊಬ್ಬನಿಗೆ ಬರೋಬ್ಬರಿ 22 ಲಕ್ಷ ರೂಪಾಯಿ ಅಂದಾಜು ಬಿಲ್ ಬಂದಿದೆ. ಅಚ್ಚರಿ ಏನೆಂದರೆ, ಕಾರಿನ ಒಟ್ಟು ಬೆಲೆಯೇ 11 ಲಕ್ಷ ರೂಪಾಯಿ. ಹೀಗಿರುವಾಗ ಅದರ ದುರಸ್ತಿಯ ಅಂದಾಜು ಮೊತ್ತ 22 ಲಕ್ಷ ರೂಪಾಯಿ ಬಂದಿರುವುದನ್ನು ನೋಡಿ ಕಾರು ಮಾಲೀಕರೇ ಶಾಕ್ ಆಗಿದ್ದಾರೆ.
ವಿವರಣೆಗೆ ಬರುವುದಾದರೆ, ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಗೆ ಬೆಂಗಳೂರು ನಗರವು ಮೊಣಕಾಲು ಆಳದ ನೀರಿನಲ್ಲಿ ಮುಳುಗಿತ್ತು. ದಿನಗಟ್ಟಲೆ ರಸ್ತೆಗಳು ಜಲಾವೃತಗೊಂಡವು, ಮಳೆನೀರು ಮನೆಗಳಿಗೆ ನುಗ್ಗಿತು, ಸಾರ್ವಜನಿಕ ಸಾರಿಗೆಯು ಕೆಟ್ಟುಹೋಯಿತು ಮತ್ತು ಜನರು ದೋಣಿಗಳು ಮತ್ತು ಟ್ರ್ಯಾಕ್ಟರ್ಗಳ ಮೂಲಕ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದರ ಮಧ್ಯೆ, ಅನೇಕ ಕಟ್ಟಡಗಳ ನೆಲಮಾಳಿಗೆಗಳು ಮತ್ತು ಗ್ಯಾರೇಜ್ಗಳಲ್ಲಿ ನೀರು ನಿಂತಿರುವುದನ್ನು ತೋರಿಸುವ ವಿಡಿಯೋಗಳು ವೈರಲ್ ಆದವು. ಇದರಿಂದಾಗಿ ಹಲವಾರು ಕಾರುಗಳು ಮುಳುಗಡೆಯಾಗಿ ಅಪಾರ ಪ್ರಮಾಣದ ಹಾನಿಯಾಯಿತು.
ಇದೇ ಪ್ರವಾಹದಲ್ಲಿ ತಮ್ಮ ಕಾರಿಗೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಕಾರು ಮಾಲೀಕ ಅನಿರುದ್ಧ್ ಗಣೇಶ್ ಎಂಬುವರು ದುರಸ್ತಿಗೆಂದು ತಮ್ಮ ವೋಲ್ಸ್ವ್ಯಾಗನ್ ಕಾರನ್ನು ವೈಟ್ಫೀಲ್ಡ್ನಲ್ಲಿರುವ ವೋಕ್ಸ್ವ್ಯಾಗನ್ ಆಪಲ್ ಆಟೋ ಸರ್ವೀಸ್ ಕೇಂದ್ರಕ್ಕೆ ಬಿಟ್ಟಿದ್ದರು. ಕಾರು ದುರಸ್ತಿಗು ಮುನ್ನ ಅಂದಾಜು ಮೊತ್ತದ ಬಿಲ್ ನೋಡಿ ದಂಗಾಗಿರುವ ಅನಿರುದ್ಧ್, ಬಿಲ್ನ ಇನ್ವಾಯ್ಸ್ ಅನ್ನು ತಮ್ಮ ಲಿಂಕ್ಡಿನ್ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಇನ್ವಾಯ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅನಿರುದ್ಧ್ ಅವರ ಕಾರು ವಿಮಾ ಕಂಪನಿಯು ಕಾರನ್ನು ಒಟ್ಟು ನಷ್ಟವೆಂದು ಬರೆದು, ಅದನ್ನು ಸಂಗ್ರಹಿಸುವುದಾಗಿ ಭರವಸೆ ನೀಡಿತ್ತು. ಆದರೆ, ತಮ್ಮ ಕಾರನ್ನು ಸರ್ವೀಸ್ ಕೇಂದ್ರದಿಂದ ಮರಳಿ ಪಡೆಯಲು 44,840 ರೂಪಾಯಿ ಪಾವತಿಸುವಂತೆ ಕೇಳಿದರಂತೆ. ಕಾರಿನ ಹಾನಿಯ ಬಗ್ಗೆ ದಾಖಲೆಗಳನ್ನು ನೀಡಲು ಈ ಶುಲ್ಕವನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರಂತೆ. ಹಣ ಪಾವತಿಸದೇ ಹೋದರೆ, ಕಾರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು. ಇನ್ವಾಯ್ಸ್ ನೀಡಲು ಪ್ರಮಾಣಿತ ಉದ್ಯಮ ಅಭ್ಯಾಸದ ಪ್ರಕಾರ 5 ಸಾವಿರ ರೂಪಾಯಿ. ಆದರೆ, 6 ಲಕ್ಷ ಮೌಲ್ಯದ ಕಾರಿಗೆ 44,840 ರೂಪಾಯಿ ಕೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ವೋಕ್ಸ್ವ್ಯಾಗನ್ ಇಂಡಿಯಾಗೆ ಮೇಲ್ ಮಾಡುವ ಮೂಲಕ ದೂರು ನೀಡಿದ್ದೇನೆ. 48 ಗಂಟೆಗಳಲ್ಲಿ ಉತ್ತರ ನೀಡುವುದಾಗಿ ಹೇಳಿದರು. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಾನು ಇನ್ವಾಯ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಇದರಿಂದ ಹೆಚ್ಚು ರೀಚ್ ಪಡೆಯುವ ಮೂಲಕವಾದರೂ ಸಂಬಂಧಪಟ್ಟವರ ಗಮನಕ್ಕೆ ತಂದು ನನ್ನ ಕಾರು ಮತ್ತು ವಿಮಾನ ಹಣವನ್ನು ಮರಳಿ ಪಡೆದು, ಸರ್ವೀಸ್ ಕೇಂದ್ರದ ರಣಹದ್ದು ತರಹದ ಅಭ್ಯಾಸಕ್ಕೆ ಬ್ರೇಕ್ ಹಾಕಬೇಕೆಂಬುದೇ ನನ್ನ ಉದ್ದೇಶ ಎಂದು ಅನಿರುದ್ಧ್ ಹೇಳಿದರು.
ಸದ್ಯ ಅನಿರುದ್ಧ್ ಅವರ ಪೋಸ್ಟ್ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ, ಅದು ಪರಿಣಾಮಕಾರಿ ಸಹ ಆಗಿದ್ದು, ಕೆಲವು ದಿನಗಳ ನಂತರ ಮತ್ತೆ ಪೋಸ್ಟ್ ಮಾಡಿರುವ ಅನಿರುದ್ಧ್, ಶುಲ್ಕವನ್ನು ಹಿಂದಿನ ರೂ.44,840 ರಿಂದ ರೂ.5,000 ಕ್ಕೆ ಪರಿಷ್ಕರಿಸಲಾಗಿದೆ ಎಂದು ಹೇಳಿದರು. (ಏಜೆನ್ಸೀಸ್)
ಮಾಲ್ನಲ್ಲಿ ಲೈಂಗಿಕ ದೌರ್ಜನ್ಯ: ನಟಿಯರ ಹೇಳಿಕೆಯಿಂದ ಆರೋಪಿಗಳ ಎದೆಯಲ್ಲಿ ಶುರುವಾಯ್ತು ನಡುಕ
ಸೂಪರ್ಫಾಸ್ಟ್ ‘ವಂದೇ ಭಾರತ್’ ರೈಲಿಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷತೆ?
ತಪ್ಪು ಆಹಾರ ಸೇವಿಸಿದ್ರೆ… ಮಾಂಸಾಹಾರಿಗಳಿಗೆ ಸಲಹೆ ನೀಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್