ನವದೆಹಲಿ: ಬಹಳ ವರ್ಷಗಳ ಹಿಂದೆ ಕಳ್ಳತನವಾಗಿದ್ದ 500 ವರ್ಷಗಳ ಹಿಂದಿನ ಹನುಮಂತನ ವಿಗ್ರಹವು ಮರಳಿ ಗೂಡಿಗೆ ಸೇರಲಿದೆ. 2012ರಲ್ಲಿ ತಮಿಳುನಾಡಿನಲ್ಲಿ ಕದ್ದು ವಿದೇಶಕ್ಕೆ ಕೊಂಡೊಯ್ಯಲಾಗಿತ್ತು. ಇದೀಗ 1 ದಶಕಗಳ ನಂತರ ಹನುಮನ ವಿಗ್ರಹ ಭಾರತಕ್ಕೆ ಮರಳಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವರಾದ ಜಿ.ಕಿಶನ್ ರೆಡ್ಡಿ ಬುಧವಾರ ತಿಳಿಸಿದ್ದಾರೆ.
14-15ನೇ ಶತಮಾನದ ವಿಗ್ರಹವಾಗಿದ್ದು, ಇದು ವಿಜಯನಗರ ಕಾಲದ್ದಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಖಾಸಗಿ ಖರೀದಿದಾರರ ಬಳಿ ಇದು ಪತ್ತೆಯಾಗಿದೆ. 500 ವರ್ಷದ ಪುರಾತನ ಕಾಲದ ಹನುಮಂತನ ಕಂಚಿನ ವಿಗ್ರಹವನ್ನು ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನ ಮಾಡಲಾಗಿತ್ತು. ಕದ್ದ ವಿಗ್ರಹವನ್ನು ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ತಮ್ಮ ವಶಕ್ಕೆ ಪಡೆದುಕೊಂಡು ಅದನ್ನು ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಭಾರತದ ಹೈಕಮಿಷನ್ಗೆ ಹಸ್ತಾಂತರ ಮಾಡಿದೆ. ಶೀಘ್ರದಲ್ಲೇ ಆ ವಿಗ್ರಹ ಭಾರತಕ್ಕೆ ಮರಳಲಿದೆ ಎಂದು ಸಚಿವ ಜಿ.ಕಿಶನ್ ರೆಡ್ಡಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮಂಗಳವಾರ ಹನುಮನ ವಿಗ್ರಹವನ್ನು ಕ್ಯಾನ್ಬೆರಾದಲ್ಲಿರುವ ಭಾರತೀಯ ಹೈಕಮಿಷನರ್ ಮನ್ಪ್ರೀತ್ ವೋಹ್ರಾ ಅವರಿಗೆ ಆಸ್ಟ್ರೇಲಿಯಾದ ಚಾರ್ಜ್ ಡಿ ಅಫೇರ್ಸ್ ಮೈಕೆಲ್ ಗೋಲ್ಡ್ಮನ್ ಹಿಂತಿರುಗಿಸಿದ್ದಾರೆ.
500 year old Lord Hanuman bronze idol stolen from Tamil Nadu temple, to be repatriated back to 🇮🇳
The stolen idol retrieved by US Homeland Security was handed over to @HCICanberra by US CDA
Under the leadership of PM Sh @narendramodi the repatriation of our heritage continues. pic.twitter.com/851HaEkVXG
— G Kishan Reddy (@kishanreddybjp) February 23, 2022
ಭಾರತದ ಪುರಾತತ್ವ ಸಮೀಕ್ಷೆ (ಎಎಸ್ಐ) ಇಲಾಖೆಯ ಪ್ರಕಾರ ಹನುಮಂತನ ವಿಗ್ರಹವನ್ನು ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳ ಜತೆಯಲ್ಲಿ ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ವೆಲ್ಲೂರು ಗ್ರಾಮದಲ್ಲಿರುವ ವರದರಾಜಾ ಪೆರುಮಾಳ್ ದೇವಸ್ಥಾನದಿಂದ ಏಪ್ರಿಲ್ 9, 2012ರಲ್ಲಿ ಕಳ್ಳತನ ಮಾಡಲಾಗಿತ್ತು. 2014ರ ಮಾರ್ಚ್ನಲ್ಲಿ ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿ ಖರೀದಿದಾರರಿಗೆ ಹರಾಜು ಮಾಡಲಾಯಿತು. ಆವಿಷ್ಕಾರ ಮತ್ತು ಪರಿಣಾಮವಾಗಿ ತನಿಖೆಯ ನಂತರ, ಇದು ಭಾರತದಿಂದ ಕದ್ದ ಅದೇ ವಿಗ್ರಹ ಎಂದು ಕಂಡುಬಂದಿತು. ಪತ್ತೆಹಚ್ಚಲು ತಮಿಳುನಾಡು ಐಡಲ್ ವಿಂಗ್ಗೆ ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಸಹಾಯ ಮಾಡಿತು.
ನ್ಯೂಯಾರ್ಕ್ ಮೂಲದ ಹರಾಜಿನ ಮನೆಯಲ್ಲಿ ಈ ವಿಗ್ರಹವನ್ನು ಹರಾಜಿಗೆ ಇಡಲಾಡಿತ್ತು. ಬಳಿಕ ಇದನ್ನು ಆಸ್ಟ್ರೇಲಿಯಾದ ಖರೀದಿದಾರನೊಬ್ಬ ಕದ್ದ ವಿಗ್ರಹ ಎಂಬುದನ್ನು ತಿಳಿಯದೇ ಖರೀದಿ ಮಾಡಿದ್ದ. ಇದೀಗ ವಿಗ್ರಹವು ಕಳ್ಳತನದಿಂದ ಬಂದ ವಿಗ್ರಹ ಎಂಬುದು ಗೊತ್ತಾಗಿದ್ದು, ಅದನ್ನು ಹಿಂತಿರುಗಿಸಿದ್ದಾರೆ. ಸರ್ಕಾರವು ಕಳೆದ ಏಳು ವರ್ಷಗಳಲ್ಲಿ ಸುಮಾರು 212 ಕಲಾಕೃತಿಗಳನ್ನು, ಮುಖ್ಯವಾಗಿ ಪ್ರತಿಮೆಗಳನ್ನು ಹಿಂಪಡೆದಿದೆ. (ಏಜೆನ್ಸೀಸ್)
VIDEO: ಅಂಪೈರ್ಗೆ ರ್ಯಾಕೆಟ್ನಿಂದ ಹೊಡೆಯಲು ಯತ್ನಿಸಿದ ಟೆನಿಸ್ ಆಟಗಾರ, ಮುಂದೇನಾಯ್ತು?
ಸೊಸೈಟಿಗಳ ಠೇವಣಿ ಟೋಪಿ; ಇಟ್ಟ ಹಣಕ್ಕಿಲ್ಲ ಗ್ಯಾರಂಟಿ: ರಾಜ್ಯದ 2460 ಸಂಸ್ಥೆಗಳು ಬಂದ್, 3509 ದಿವಾಳಿ