ಮಂಡ್ಯ: ಜಗತ್ತಿನಲ್ಲಿರುವ ಸೇವಾ ಸಂಸ್ಥೆಗಳು ಸ್ನೇಹ ಹಾಗೂ ಸೇವೆ ಮಾಡುವುದರಿಂದಾಗಿ ನೂರಾರು ವರ್ಷ ಬದುಕಿ ಬಾಳುವುದರ ಜತೆಗೆ ಬೆಳೆಯುತ್ತವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಆಫ್ ಅಸೋಸಿಯೇಷನ್ ಜಿಲ್ಲೆ 268 ಶನಿವಾರ ಆಯೋಜಿಸಿದ್ದ ಮಂಡ್ಯ ಅಲಯನ್ಸ್ ಸಂಸ್ಥೆಗಳ 2024-25ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಮತ್ತು ಹೊಸ ಕ್ಲಬ್ ಉದ್ಘಾಟನೆ ಹಾಗೂ ಸೇವಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರೆಡ್ಕ್ರಾಸ್, ರೋಟರಿ, ಅಲಯನ್ಸ್, ಲಯನ್ಸ್ ಸೇರಿದಂತೆ ಹಲವು ಸೇವಾಸಂಸ್ಥೆಗಳು ಇವೆ. ಇವು ಸ್ನೇಹ-ಸೇವೆ ಧ್ಯೇಯದಿಂದ ನೂರಾರು ವರ್ಷಗಳು ಬಾದುಕಿ ಬಾಳುತ್ತಿವೆ. ಇಂತಹಗಳ ಪೈಕಿ ಅಲಯನ್ಸ್ ಸಂಸ್ಥೆಗೆ ಮಂಡ್ಯದಲ್ಲಿ ಸಂಸ್ಥಾಪಕ ಸದಸ್ಯರಿರುವುದು ಚರಿತ್ರಾರ್ಹ ಎಂದು ನುಡಿದರು.
ಅಲಯನ್ಸ್ ಸಂಸ್ಥೆಯನ್ನು ಸ್ನೇಹ ಮತ್ತು ಸೇವಾಕಾರ್ಯಕ್ಕಾಗಿ ಪ್ರಾರಂಭ ಮಾಡಲಾಯಿತು. ಇಲ್ಲಿ ಚುನಾವಣೆ ಮಧ್ಯ ಬರಬಾರದು, ರಾಜಕೀಯ ಬೆರೆಯಬಾರದು. ನಮ್ಮ ಹಣದಿಂದ ಸೇವಾಕಾರ್ಯ ಮಾಡಿ, ಸಮಾಜಕ್ಕೆ ಸೇವೆ ಸಲ್ಲಿಸುವುದು ತೃಪ್ತಿಗಾಗಿ, ಆತ್ಮಸಂತೋಷಕ್ಕಾಗಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಲಯನ್ಸ್ ಸಂಸ್ಥೆ ಜಿಲ್ಲೆ 268ರ ಜಿಲ್ಲಾ ಗರ್ವನರ್ ಕೆ.ಟಿ.ಹನುಮಂತು ಮಾತನಾಡಿ, ಮುಂದಿನ ದಿಗಳಲ್ಲಿ ಅಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಉತ್ತಮ ಸೇವಾಕಾರ್ಯ ಮಾಡಬೇಕು. ಜತೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಿ, ಪರಿಸರ, ಆರೋಗ್ಯ ಸೇವೆಗೆ ಹೆಚ್ಚು ಮಹತ್ವ ನೀಡಿ. ಎಲ್ಲರಲ್ಲೂ ಸೇವಾಮನೋಭಾವ ಬರುವುದಿಲ್ಲ. ಅಂತಹವರಲ್ಲೂ ಸೇವಾಕಾರ್ಯ ಮಾಡಿಸುವ ಉದ್ದೇಶಗಳು ನಮ್ಮಿಂದ ಆಗಬೇಕು. ವರ್ಷಕ್ಕೆ 2 ಸೇವಾ ಕಾರ್ಯ ಮಾಡಿ ಉತ್ತಮ ಸೇವಾ ಸಂಸ್ಥೆ ಎನ್ನಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಅಲಯನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಜಿ.ಪಿ.ದಿವಾಕರ್, ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಜಂತ ರಂಗಸ್ವಾಮಿ, ಕೆ.ಮುನಿಯಪ್ಪ, 1ನೇ ಉಪ ಗವರ್ನರ್ ಎಚ್.ಮಾದೇಗೌಡ, 2ನೇ ಉಪ ಗವರ್ನರ್ ಕೆ.ಆರ್.ಶಶಿಧರ ಈಚೆಗೆರೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ಸಂಪುಟ ಖಜಾಂಚಿ ಟಿ.ಎನ್.ರಕ್ಷಿತ್ರಾಜ್, ಪಿಆರ್ಒ ಅಪ್ಪಾಜಿ, ಜಿಲ್ಲಾ ರಾಯಭಾರಿ ಎಸ್.ಜೆ. ಮಂಜುನಾಥ್, ಪಿಎಸ್ಟಿ ಫಾರ್ಮ್ನ ಅಧ್ಯಕ್ಷೆ ವೈ.ಎಚ್.ರತ್ನಮ್ಮ, ಪ್ರಾಂತೀಯ ಅಧ್ಯಕ್ಷೆ ಜಲಜಾಕಿ,್ಷ ವಲಯ ಅಧ್ಯಕ್ಷ ಆರ್.ಮಹೇಶ್, ಎಂ.ಲೋಕೇಶ್, ಮಹಾಲಕ್ಷ್ಮೀ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಯಿತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಡ ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ ಆರ್ಥಿಕ ನೆರವು ನೀಡಲಾಯಿತು.