ಚೆನ್ನೈ: ಪೆಟ್ರೋಲ್ ಬೆಲೆ ದಿನೇದಿನೆ ಹೆಚ್ಚಳವಾಗುತ್ತಿದೆ. ಆದರೆ ಈ ಒಂದು ಪೆಟ್ರೋಲ್ ಬಂಕ್ ಮಾತ್ರ ಉಚಿತವಾಗಿಯೇ ಪೆಟ್ರೋಲ್ ಕೊಡೋದಕ್ಕೆ ಸಿದ್ಧವಿದೆ. ಇಂತಹ ಒಂದು ನಿರ್ಧಾರವನ್ನು ಬಂಕ್ ಯಾವ ಕಾರಣಕ್ಕೆ ತೆಗೆದುಕೊಂಡಿದೆ, ಫ್ರೀ ಪೆಟ್ರೋಲ್ ಪಡೆಯೋದಕ್ಕೆ ಏನು ಮಾಡಬೇಕು ಎಂದು ಅರಿಯಲು ಮುಂದೆ ಓದಿ..
ತಮಿಳುನಾಡಿನ ಕರೂರು ಜಿಲ್ಲೆಯ ನಾಗಂಪಳ್ಳಿ ಗ್ರಾಮದಲ್ಲಿರುವ ವಲ್ಲುವರ್ ಏಜೆನ್ಸಿಗಳ ಪೆಟ್ರೋಲ್ ಬಂಕ್ನಲ್ಲಿ ಇಂತದ್ದೊಂದು ಆಫರ್ ಇದೆ. ಇಲ್ಲಿ ನಿಮಗೆ ಉಚಿತ ಪೆಟ್ರೋಲ್ ಬೇಕೆಂದರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬೇಕು. 1ರಿಂದ 12ನೇ ತರಗತಿವರೆಗಿನ ಯಾವುದೇ ವಿದ್ಯಾರ್ಥಿ ತಿರುವಳ್ಳುವರ ತಿರುಕ್ಕುರಲ್ನ ಯಾವುದಾದರೂ ದ್ವಿಪದಿಗಳನ್ನು ಹೇಳಿದರೆ ನಿಮಗೆ ಉಚಿತವಾಗಿ ಪೆಟ್ರೋಲ್ ಸಿಗುತ್ತದೆ. 10 ದ್ವಿಪದಿ ಹೇಳಿದರೆ ಅರ್ಧ ಲೀಟರ್ ಹಾಗೂ 20 ದ್ವಿಪದಿ ಹೇಳಿದರೆ ಒಂದು ಲೀಟರ್ ಪೆಟ್ರೋಲ್ ಫ್ರೀ.
ತಮಿಳುನಾಡಿನ ಶ್ರೇಷ್ಠ ಕವಿ ತಿರುವಳ್ಳುವರ ಸಾವಿರಾರು ದ್ವಿಪದಿಗಳನ್ನು ರಚಿಸಿದ್ದಾರೆ. ಅದನ್ನೆಲ್ಲ ಒಟ್ಟುಗೂಡಿಸಿ ತಿರುಕ್ಕುರಲ್ ಹೆಸರಿನ ಪಠ್ಯ ರಚಿಸಲಾಗಿದೆ. ರಾಜ್ಯದ ಮಕ್ಕಳಲ್ಲಿ ಆ ದ್ವಿಪದಿಗಳನ್ನು ಉಳಿಸಿ, ಸಾಹಿತ್ಯ ಪ್ರೀತಿಯನ್ನು ಬೆಳೆಸುವ ಸಲುವಾಗಿ ಪೆಟ್ರೋಲ್ ಬಂಕ್ನವರು ಈ ಯೋಜನೆ ಹಾಕಿಕೊಂಡಿದ್ದಾರಂತೆ.
ಮಕ್ಕಳು ತಾವು ಹೇಳುವ ದ್ವಿಪದಿಯನ್ನು ಬರೆದಿರುವ ಪುಟವನ್ನು ಪೆಟ್ರೋಲ್ ಬಂಕ್ನವರಿಗೆ ನೀಡಬೇಕು. ನಂತರ ಅದನ್ನು ನೋಡದೆಯೇ ಹೇಳಬೇಕು. ಮಕ್ಕಳು ಯಾವುದೇ ತಪ್ಪಿಲ್ಲದೆ ದ್ವಿಪದಿ ಹೇಳಿದರೆ ಬಂಕ್ನವರು ಖುಷಿಯಿಂದ ಗಾಡಿಗೆ ಉಚಿತ ಪೆಟ್ರೋಲ್ ತುಂಬಿಸಿ ಕಳಿಸುತ್ತಾರೆ. ತಪ್ಪು ಹೇಳಿದ್ದಾದಲ್ಲಿ, ದುಡ್ಡು ಕೊಟ್ಟು ಪೆಟ್ರೋಲ್ ತುಂಬಿಸಿಕೊಳ್ಳಬಹುದು. (ಏಜೆನ್ಸೀಸ್)
ಶುರುವಾಯ್ತು ದೀದಿಯ ‘ಮಾ’ ಕ್ಯಾಂಟೀನ್; ವೋಟ್ ಬ್ಯಾಂಕಿಂಗ್ ತಂತ್ರ ಎಂದು ಕಾಲೆಳೆದ ಬಿಜೆಪಿ
ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್ಕಿಟ್ನಲ್ಲಿತ್ತು ಈ ಎಲ್ಲ ಮಾಹಿತಿಗಳು!