ಬೆಂಗಳೂರು: ಸಿನಿಮಾ ಮಾಡಿಕೊಡುವುದಾಗಿ ಮುಂಗಡ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಮ ಎಂ.ಎನ್. ಕುಮಾರ್ ಅವರು ಮಾಡಿರುವ ಆರೋಪಕ್ಕೆ ನಿರ್ಮಾಪಕ, ವಿತರಕ ಹಾಗೂ ಸುದೀಪ್ ಆಪ್ತ ಜಾಕ್ ಮಂಜು ಅವರು ಸುದ್ದಿಗೊಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ತಪ್ಪು ಸಂದೇಶ ಕೊಟ್ಟಿದ್ದಾರೆ
ಜಯನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಜಾಕ್ ಮಂಜು, ಎಂ.ಎನ್. ಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು. ಕುಮಾರ್ ಮತ್ತು ಸುದೀಪ್ ನಡುವೆ ವಾಗ್ವಾದ ನಡೆಯುತ್ತಿದೆ. ಈ ಬಗ್ಗೆ ಸುದೀಪ್ ಅಭಿಮಾನಿಗಳಿಗೆ ಇಂದು ನಾನೇ ಸ್ಪಷ್ಟನೆ ನೀಡುತ್ತೇನೆ. ಪಾರ್ಥ ಸಿನಿಮಾದಿಂದ ವಿಕ್ರಾಂತ್ ರೋಣವರೆಗೂ ಸುದೀಪ್ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಸುದೀಪ್ ಸಿನಿಮಾ ಪ್ರಯಾಣದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಭಾಮಾ ಹರೀಶ್ ಅವರು ಸುದೀಪ್ ಅವರನ್ನು ಭೇಟಿಯಾಗಿ ಕುಮಾರ್ ನೀಡಿದ್ದ ಪತ್ರ ಕೊಟ್ಟರು. ಅದಕ್ಕೆ ನಾವು ಉತ್ತರ ನೀಡಿದ್ದೇವೆ. ಆದರೆ, ನಾವು ಉತ್ತರ ಕೊಟ್ಟಿಲ್ಲ ಎಂದು ತಪ್ಪು ಸಂದೇಶ ಕೊಟ್ಟಿದ್ದಾರೆ ಸಹ. ನಾವು ಮಾತೃ ಸಂಸ್ಥೆಗೆ ಅಗೌರವ ತೋರಿಸಿಲ್ಲ. ನಮಗೆ ಎಲ್ಲ ಗೊತ್ತಾಗ್ತಿದೆ. ಪದೇಪದೇ ನಾವು ಉತ್ತರ ಕೊಡೋಕೆ ಆಗಲ್ಲ ಎಂದು ಹೇಳಿದರು.
ಸುದೀಪ್ಗೆ ಕೋಪ ತರಿಸಿತು
ಇಲ್ಲಿ ವಿವರಣೆ ನೀಡುವುದಕ್ಕೆ ಇನ್ನೂ ಏನು ಉಳಿದಿಲ್ಲ. ರನ್ನ ಸಿನಿಮಾ ಸಮಯದಲ್ಲಿ ಇಬ್ಬರು ಭೇಟಿಯಾಗಿದ್ದು ನಿಜ. ಈಗ ಕುಮಾರ್ ಆರ್ಥಿಕ ಕಷ್ಟದಲ್ಲಿರುವುದೂ ನಿಜ. 2020ರ ಜನವರಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಶುರುವಾಯ್ತು. ಆರೋಗ್ಯದ ಸಮಸ್ಯೆಯಿಂದಾಗಿ ಕುಮಾರ್ ಅವರಿಗೆ ಸುದೀಪ್ ಅವರನ್ನು ಭೇಟಿಯಾಗೋಕೆ ಆಗಲಿಲ್ಲ. ಆ ಬಳಿಕ ಪ್ರಿಯಾ ಸುದೀಪ್ರನ್ನು ಭೇಟಿಯಾದರು. ಆ ವೇಳೆ ನಾನೂ ಇದ್ದೆ. ಆಮೇಲೆ ಸುದೀಪ್ ಮತ್ತು ಕುಮಾರ್ ಭೇಟಿಯಾದರು. ಸುದೀಪ್ 5 ಕೋಟಿ ರೂ. ಸಹಾಯ ಮಾಡುವುದಕ್ಕೆ ಒಪ್ಪಿದರು. ಕುಮಾರ್ ಕೋಪದಿಂದ ಬೇಡ ಎಂದರು. ನಾನೇನು ಭಿಕ್ಷೆ ಕೇಳುವುದಕ್ಕೆ ಬಂದಿದ್ದೀನ ಅಂತ ಬೈದರು. ಅದು ಸುದೀಪ್ಗೆ ಬೇಸರವಾಯಿತು. ನಾನೇನೂ ಇವರಿಂದ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ದೀನಾ ಅಂತ ಸುದೀಪ್ಗೆ ಬೇಜಾರಾಯ್ತು. ಕುಮಾರ್ ನಡವಳಿಕೆ ಸುದೀಪ್ಗೆ ಕೋಪ ತರಿಸಿತು ಎಂದರು.
ದಾಖಲೆಗಳಿಲ್ಲದೇ ಮಾತಾಡ್ತಿದ್ದಾರೆ
ಸುದೀಪ್ಗೆ ಕುಮಾರ್ ಅವರಿಂದ ಸಾಕಷ್ಟು ಒತ್ತಡವಿದೆ. ಒಂದು ಸಿನಿಮಾಗೆ ಒಂದು ಬಜೆಟ್ ಹಾಕ್ತೀವಿ. ಅದು 50 ರಿಂದ 60 ಕೋಟಿ ಆಗುತ್ತದೆ. ಆಗ ಆ ಸಿನಿಮಾದ ವ್ಯವಹಾರ ಅಲ್ಲಿಗೆ ನಿಲ್ಲುತ್ತದೆ. ನಂತರ ಮೂರ್ನಾಲ್ಕು ವರ್ಷ ಆದಮೇಲೆ, ಪ್ರತೀ ಬಾರಿ ಕುಮಾರ್ ಅವರ ಜೊತೆ ಮೀಟಿಂಗ್ ನಡೆಯುತ್ತದೆ. ಒಂದು ಕಂಪನಿಯ ಜೊತೆ ಮಾತುಕತೆ ಸಹ ಆಗುತ್ತದೆ. ಬಳಿಕ 5 ಕೋಟಿ ನಿಮಗೆ ಕೊಡ್ತಾರೆ, ಉಳಿದ 55 ಕೋಟಿ ನಂತರ ಬರೋ ಬಿಸಿನೆಸ್ನಲ್ಲಿ ಪಾಲು ಮಾಡೋದು ಅಂತ ಆಗುತ್ತದೆ. ಇದಾದ ಬಳಿಕ ನಾನೇ ದೊಡ್ಡ ನಿರ್ಮಾಪಕ, ನಾನೇ ಸಿನಿಮಾ ಮಾಡ್ತೀನಿ ಎಂದು ಹೇಳುತ್ತಾರೆ. ನಂತರ ಈ ಸಂಗತಿ ಫಿಲಂ ಚೇಂಬರ್ಗೆ ಹೋಗುತ್ತದೆ. ಇದಾದ ಬಳಿಕ ಈ ರೀತಿ ಆರೋಪ ಮಾಡಿ ಮಾತನಾಡುತ್ತಿದ್ದಾರೆ. ಅದು ಕೂಡ ದಾಖಲೆಗಳಿಲ್ಲದೇ ಮಾತಾಡ್ತಿದ್ದಾರೆ. ಅದಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗಿದ್ದೀವಿ ಎಂದು ಹೇಳಿದರು.
ಯಾವುದೇ ಹಣ ಕೊಟ್ಟಿಲ್ಲ
ಕುಮಾರ್ ಅವರೇ ಸುದೀಪ್ ಅವರ ಮನೆಯಿಂದ ಸಾಕಷ್ಟು ಸಹಾಯ ಮಾಡಿಸಿಕೊಂಡಿದ್ದಾರೆ. ಆರ್ಆರ್ ನಗರದಲ್ಲಿರುವ ಮನೆ ಮೊನ್ನೆ ತಾನೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸುದೀಪ್ ಅವರು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಆರ್.ಆರ್. ನಗರದ ಮನೆಯ ಲೋನ್ ಸುದೀಪ್ ಹೆಸರಲ್ಲಿದೆ. ಅಲ್ಲದೆ, ಕುಮಾರ್ ಅವರು ಸುದೀಪ್ ಮನೆ ರಿಪೇರಿಗೆ ಯಾವುದೇ ಹಣ ಕೊಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭಾರತವೀಗ ನನ್ನದು! ಪಬ್ಜಿಯಿಂದ ಶುರುವಾದ ಪ್ರೀತಿ ಸುಖಾಂತ್ಯ, ಇಲ್ಲಿಯೇ ಉಳಿಯಲು ಪಾಕ್ ಮಹಿಳೆ ನಿರ್ಧಾರ
ಸಂಧಾನದ ಮಾತೇ ಇಲ್ಲ
ಕುಮಾರ್ ಮಾಡಿರುವ ಆರೋಪಕ್ಕೆ ನಾವು ಕಾನೂನು ಮೂಲಕವೇ ಹೊರಾಟ ಮಾಡುತ್ತೇವೆ. ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಜಾಕ್ ಮಂಜು ಹೇಳಿದ್ದಾರೆ. ಸುದೀಪ್ ಪರವಾಗಿ ನಿರ್ಮಾಪಕ ಜ್ಯಾಕ್ ಮಂಜು ಹಾಗು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ಸೇರಿದಂತೆ ಹಲವು ನಿರ್ಮಾಪಕರಿಂದ ಸುದೀಪ್ಗೆ ಬೆಂಬಲ ವ್ಯಕ್ತವಾಗಿವೆ.
ನಾನು ತಪ್ಪು ಮಾತಾಡಿಲ್ಲ, ನೋಟಿಸ್ ಇನ್ನೂ ತಲುಪಿಲ್ಲ; ಕಿಚ್ಚನ ಬಗ್ಗೆ ನಿರ್ಮಾಪಕರು ಹೇಳಿದ್ದೇನು?