ಕೊಪ್ಪಳ: ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸುವ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೊಪ್ಪಳದ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಭೆಯನ್ನು ಉದ್ದೇಶಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮಹಾಭಾರತದಲ್ಲಿ ಅರ್ಜನ ಗುರಿ ಹೇಗಿತ್ತೋ ಅದೇ ರೀತಿ ನಿಮ್ಮ ಗುರಿ ಇರಬೇಕು. ಅವರಿವರು ಏನು ಹೇಳ್ತಾರೆ ಎಂದು ಗೊಂದಲಕ್ಕೀಡಾಗಬಾರದು. ನಿಮ್ಮ ಗುರಿ ನಿಮ್ಮ ಭವಿಷ್ಯದ ಕಡೆ ಇರಬೇಕು. ನಿಮ್ಮ ಗುರಿ ನಿಮ್ಮ ಮಕ್ಕಳ ಭವ್ಯ ಭವಿಷ್ಯದ ಕಡೆ ಇರಬೇಕು. ನಿಮ್ಮ ಭವಿಷ್ಯವನ್ನು ಯಾರು ರೂಪಿಸುತ್ತಾರೋ ಅವರಿಗೆ ಮತ ನೀಡಿ ಎಂದರು.
ಇದನ್ನೂ ಓದಿ: ಅವಿವಾಹಿತ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಪಕ್ಷೇತರ ಅಭ್ಯರ್ಥಿ!
ಸ್ವಾಭಿಮಾನದ ಸರ್ಕಾರ ಆಗಿರುತ್ತದೆ
ಬಿಜೆಪಿ ಸರ್ಕಾರ ನಿಮಗೆ ಏನು ಮಾಡಿದೆ. ಕಾಂಗ್ರೆಸ್ ಏನು ಹೇಳಿದೆ ಅದನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್ ಪಕ್ಷವನ್ನ ಪೂರ್ಣಬಹುಮತದೊಂದಿಗೆ ಗೆಲ್ಲಿಸಿ. ದುರ್ಬಲ ಸರ್ಕಾರ ಬಂದರೆ, ಅದನ್ನ ಉಳಿಸಿಕೊಳ್ಳುವುದಕ್ಕೆ ಹೋರಾಡುತ್ತಾರೆ. ನೀವು ಈ ಬಾರಿ ಸ್ವಾಭಿಮಾನದಿಂದ ಮತಚಲಾಯಿಸಿ. ಆಗ ಇಡೀ ದೇಶ ನಿಮ್ಮ ಕಡೆಗೆ ತಿರುಗಿ ನೋಡುತ್ತದೆ. ಯಾಕೆಂದರೆ, ನೀವು ಗರ್ವ, ಸ್ವಾಭಿಮಾನದಿಂದ ರಚಿಸಿದ ಸರ್ಕಾರ ಆಗಿರುತ್ತೆದೆ. ಇದು ಕನ್ನಡದ ಸ್ವಾಭಿಮಾನದ ಸರ್ಕಾರ ಆಗಿರುತ್ತದೆ ಎಂದು ಹೇಳಿದರು.
ಆಪರೇಷನ್ ಕಮಲ
ಇದು ಸತ್ಯದ ಕ್ಷೇತ್ರ, ಇಲ್ಲಿನ ಜನ ಸತ್ಯವನ್ನ ನುಡಿಯುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟ ಕೂಡಾ ಸತ್ಯ ಹಾದಿಯಲ್ಲೇ ನಡೆದಿತ್ತು. ಮಹಾತ್ಮಾ ಗಾಂಧಿ ಹಾಗೂ ನೆಹರು ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದರು. ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ಕರ್ನಾಟಕ ಇಡೀ ದೇಶದಲ್ಲಿ ಪ್ರಸಿದ್ಧವಾದ ನಾಡು. ಜಗತ್ತಿನ ದೊಡ್ಡ ಕಂಪನಿಗಳ ಸಿಇಓ ಈ ನಾಡಿನ ಪುಣ್ಯಭೂಮಿಯವರು. ಒಂದು ಸಮಯದಲ್ಲಿ ಈ ರಾಜ್ಯ, ಐಟಿ, ತಂತ್ರಜ್ಞಾನ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದಲ್ಲಿ ಮುಂದಿತ್ತು. ಕಳೆದ ಬಾರಿ ನೀವು ಮತಹಾಕಿ ಒಂದು ಸರ್ಕಾವರನ್ನು ತಂದಿದ್ದೀರಿ. ಆದರೆ, ಬಿಜೆಪಿ ತನ್ನ ಹಂಬಲದಿಂದ ಸರ್ಕಾರವನ್ನ ಬೀಳಿಸಿತು. ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸ್ಥಳೀಯ ಶಾಸಕನೇ ಭಾಗಿ
ಇಂದಿರಾಗಾಂಧಿಯನ್ನು ಇವತ್ತಿಗೂ ನಿವ್ಯಾಕೆ ನೆನೆಸುತ್ತೀರಿ. ಅವರು ಬಡವರಿಗೆ ನೀಡಿದ ಉಳುವವನೇ ಭೂಮಿ ಒಡೆಯ ಅನ್ನೋ ಮಹಾನ್ ಯೋಜನೆಯಿಂದ ಅವರನ್ನು ನೆನೆಯುತ್ತೀರಿ. ರಾಜ್ಯದ ಬಿಜೆಪಿ ಸರ್ಕಾರ 40 ಪರ್ಸೆಂಟೆ ಕಮಿಷನ್ ಸರ್ಕಾರ ಎಂದು ಪ್ರಸಿದ್ಧಿ ಪಡೆದಿದೆ. ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ಕೆಟ್ಟ ಹೆಸರು ಪಡೆದುಕೊಂಡಿದೆ. ಈ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಲ್ವಾ? ಪಿಎಸ್ಐ ಹಗರಣ ಸೇರಿದಂತೆ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಇಲ್ಲಿನ ಸ್ಥಳೀಯ ಶಾಸಕನೇ ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದ ಎನ್ನುವ ಮೂಲಕ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸೂಗುರ್ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ನಡೆದಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಡೆಯಲಿರುವ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಕೊಂಚ ಬದಲಾವಣೆ
ದಿನಬಳಕೆ ವಸ್ತುಗಳು ಗಗನಕ್ಕೇರಿವೆ
ಈ ರಾಜ್ಯದ ಬಿಜೆಪಿ ಶಾಸಕನ ಮನೆಯಲ್ಲಿ 8 ಕೋಟಿ ಹಣ ಸಿಕ್ತು. ಅಂತವನು ಮೆರವಣಿಗೆ ಮಾಡಿಕೊಂಡು ಬರ್ತಾನೆ. ಬಿಜೆಪಿ ಲೂಟಿ ಮಾಡಿದ ದುಡ್ಡು ಈ ರಾಜ್ಯದ ಜನರದ್ದು. ಇವತ್ತು ದಿನಬಳಕೆ ವಸ್ತುಗಳು ಗಗನಕ್ಕೇರಿವೆ. ದಿನ ಬೆಳಗಾದ್ರೆ ಊಟ ಮಾಡೋಕೂ ಯೋಚನೆ ಮಾಡಬೇಕಾಗಿದೆ. ಬೆಲೆ ಏರಿಕೆ ಸಮಾನ್ಯ ಜನರಿಗೆ ಸಂಕಷ್ಟ ತಂದಿದೆ. ಆದರೆ ನಿಮ್ಮನಾಳೋ ಸರ್ಕಾರದ ಸಚಿವರು, ಶಾಸಕರು ಬಿಂದಾಸ್ ಆಗಿದ್ದಾರೆ ಎಂದು ಗುಡುಗಿದರು.
ನಿಮ್ಮ ಹಕ್ಕಿಗೆ ನೀವು ಲಂಚ ನೀಡುತ್ತಿದ್ದೀರಿ
ಈ ಸರ್ಕಾರ ನಿಮ್ಮ ಒಂದೂವರೆ ಲಕ್ಷ ಕೋಟಿ ರೂ. ಹಣವನ್ನು ಲೂಟಿ ಮಾಡಿದೆ. ಅದರಲ್ಲಿ ನಿಮಗೋಸ್ಕರ 100 ಏಮ್ಸ್ ಆಸ್ಪತ್ರೆ ಕಟ್ಟಬಹುದಾಗಿತ್ತು. 30 ಲಕ್ಷ ಬಡವರಿಗೆ ಆ ದುಡ್ಡಲ್ಲಿ ಮನೆ ನಿರ್ಮಿಸಬಹುದಿತ್ತು. ಇಲ್ಲಿನ ಜನ ಸಮಾನ್ಯವಾಗಿ ಎಲ್ಲರೂ ವಿದ್ಯಾವಂತರಿದ್ದೀರಿ. ಆದರೆ ಕೆಲಸ ಇಲ್ಲ ಅಂತ ಹೇಳುತ್ತಿದ್ದೀರಿ. ಈ ಸರ್ಕಾರ 2.5 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇಟ್ಟಿದೆ. ಯಾವುದೇ ಹುದ್ದೆಗೂ ನೀವು ರೇಟ್ ಫಿಕ್ಸ್ ಮಾಡಿದ್ದೀರಿ. ನಿಮ್ಮ ಹಕ್ಕಿಗೆ ನೀವು ಲಂಚ ನೀಡುತ್ತಿದ್ದೀರಿ. ರೈತರ ಆದಾಯ ದ್ವಿಗುಣ ಮಾಡ್ತಿನಿ ಅಂದ್ರಿ. ಆದ್ರೆ ನಿಮ್ಮ ಕೆಲವೇ ಕೆಲವು ವ್ಯಕ್ತಿಗಳ ಆದಾಯ ಡಬಲ್ ಆಯಿತು. ನಮ್ಮ ರೈತರ ಆದಾಯ ಕಮ್ಮಿಯಿದೆ. ಆದ್ರೆ ಮೋದಿ ಸ್ನೇಹಿತ ಅದಾನಿ ಆದಾಯ ಒಂದು ದಿನಕ್ಕೆ ಕೋಟಿ ಕೋಟಿ ಇದೆ. ಅವರಿಗೆ ಆದಾಯ ಡಬಲ್ ಆಗಿದೆ ಎಂದು ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ನಾವು ಮಾಡಿ ತೋರಿಸುತ್ತೇವೆ
ಕಾಂಗ್ರೆಸ್ ಸರ್ಕಾರ ಮತ್ತೆ ನಿಮಗೆಲ್ಲವನ್ನು ನೀಡುವುದಕ್ಕೆ ರೆಡಿಯಾಗಿದೆ. ಬೀದರ್ನಿಂದ ಚಾಮರಾಜನಗರದವರೆಗೂ ಕೈಗಾರಿಕಾ ಸ್ಥಾಪನೆ ಮಾಡುತ್ತೇವೆ. ಕಲಬುರಗಿ, ಬಳ್ಳಾರಿ, ಹುಬ್ಬಳ್ಳಿ, ಮೈಸೂರು ನಗರಗಳನ್ನ ಬೆಂಗಳೂರಿ ಐಟಿ ಹಬ್ ಮಾಡುತ್ತೇವೆ. ಐಟಿ ಕಂಪನಿಗಳನ್ನು ಈ ನಗರಗಳಲ್ಲಿ ಸ್ಥಾಪನೆ ಮಾಡುತ್ತೇವೆ. ನನ್ನ ಸಹೋದರಿಯರೇ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಕುತ್ತೇವೆ. ನಿಮಗೋಸ್ಕರ ಇಡೀ ರಾಜ್ಯದಲ್ಲಿ ಪ್ರಯಾಣ ಮಾಡೋದಕ್ಕೆ ಬಸ್ ಟಿಕೆಟ್ ಫ್ರಿ ನೀಡುತ್ತೇವೆ. ನನ್ನ ಅಂಗನವಾಡಿ ಸಹೋದರಿಯರೇ ನಿಮಗಾಗಿ 15 ಸಾವಿರ ರೂ. ಸಂಬಳ ನೀಡ್ತಿವಿ. ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ಸಂಬಳ ನೀಡುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿಯಾಗಿದ್ರೆ ಅವರಿಗೆ 3 ಲಕ್ಷ ರೂ. ಹಣ ನೀಡ್ತೆವೆ. ಈ ತರಹ ಎಷ್ಟೋ ಒಳ್ಳೆಯ ಯೋಜನೆ ನಿಮಗಾಗಿ ನೀಡ್ತೆವೆ. ನಿಮಗೆ ನಾವು ಮಾಡಿ ತೋರಿಸುತ್ತೇವೆ ಎಂದು ಭರವಸೆ ನೀಡಿದರು.
ಸೂಕ್ಷ್ಮವಾಗಿ ಚಿಂತನೆ ಮಾಡಿ
ಈ ಚುನಾವಣೆಯನ್ನು ಬಹಳ ಸೂಕ್ಷ್ಮವಾಗಿ ಚಿಂತನೆ ಮಾಡಿ. ನೀವು ಮತ ಹಾಕೋ ದಿನ ಬಹಳ ಚಿಂತನೆ ಮಾಡಬೇಕು. ಯಾಕೆಂದರೆ ನಿಮ್ಮ ಐದು ವರ್ಷದ ಭವಿಷ್ಯ ಅದರಲ್ಲಿರುತ್ತದೆ. ಬಿಜೆಪಿಯ ದೊಡ್ಡ ದೊಡ್ಡ ನಾಯಕರು ನಿಮ್ಮ ಮಾತು ಕೇಳಲು ಬರುತ್ತಿಲ್ಲ. ಅವರ ಭಾಷಣ ನೀವು ಕೇಳುವಂತೆ ಮಾಡುತ್ತಿದ್ದಾರೆ. ಅವರ್ಯಾರು ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ನಾನು ಶಾಲಾ ಕಟ್ಟಿಸಿದ್ದೇನೆ, ಆಸ್ಪತ್ರೆ ಕಟ್ಟಿಸಿದ್ದೇನೆ ಎಂದು ಹೇಳಲ್ಲ ಎಂದರು.
ವಿಷಬೀಜ ಬಿತ್ತುತ್ತಿದ್ದಾರೆ
ನಮ್ಮ ಪ್ರಧಾನಿ ತಮಗೆ ಕಾಂಗ್ರೆಸ್ನವರು ಬೈಯುತ್ತಿದ್ದಾರೆ ಎನ್ನುತ್ತಾರೆ. ಅವರು ಧರ್ಮದ ಬಗ್ಗೆ ಮಾತನಾಡಿ ನಮ್ಮಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ನಮ್ಮ ಪ್ರಧಾನಿ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತನಾಡಲ್ಲ. ಧರ್ಮ ಧರ್ಮದ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಮೋದಿ ವಿರುದ್ದ ಕೈ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್)
ಚಿತ್ತಾಪುರ ತಹಸೀಲ್ದಾರ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟ ಪೊಲೀಸ್ ಕಾನ್ಸ್ಟೆಬಲ್
ಕರ್ನಾಟಕದಲ್ಲಿ ಕಾಂಗ್ರೆಸ್ಗೆ ತನ್ನದೇ ಆದ ವೋಟ್ ಬ್ಯಾಂಕ್ ಇದೆ: ಅಶೋಕ್ ಚವ್ಹಾಣ್
ನಟ ಶರತ್ಬಾಬು ಕುರಿತು ಏನಿದು ವದಂತಿ?: ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಮಲಹಾಸನ್!