ಬೆಂಗಳೂರು: ಈಗಾಗಲೇ ಕೋವಿಡ್ 19 ವೈರಸ್ ಬಗ್ಗೆ ಮತ್ತು ಕ್ವಾರಂಟೈನ್ ಸೇರಿ ಹಲವು ಉಪಯುಕ್ತ ಮಾಹಿತಿ ಒಂದೇ ಕಡೆ ಲಭ್ಯವಾಗುವ ಉದ್ದೇಶದಿಂದ ಆರೋಗ್ಯ ಸೇತು ಆ್ಯಪ್ ಅನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಆ್ಯಪ್ನಲ್ಲಿ ಕರೊನಾ ಲಕ್ಷಣಗಳು ಸೇರಿ ಅದರಿಂದ ಪಾರಾಗುವ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ. ಹೀಗಿರುವಾಗಲೇ ಆ ಆ್ಯಪ್ನ್ನು ಮತ್ತಷ್ಟು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಹೊಸ ದಾರಿ ಕಂಡುಕೊಂಡಿದ್ದಾರೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮನೆಗೆ ತೆರಳಿ ಆರೋಗ್ಯ ಸೇತು ಆ್ಯಪ್ ಬಗ್ಗೆ ಜನಜಾಗೃತಿ ಮೂಡಿಸಲು ಅವರ ಬಳಿ ಕೋರಿದ್ದಾರೆ. ಉಪಮುಖ್ಯಮಂತ್ರಿಗಳ ಮಾತಿಗೆ ಗ್ರೀನ್ ಸಿಗ್ನಲ್ ನೀಡಿರುವ ಪುನೀತ್ ಶೀಘ್ರದಲ್ಲಿ ಆರೋಗ್ಯ ಸೇತು ಆ್ಯಪ್ ಉಪಯುಕ್ತತೆ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರದ ಪರಿಹಾರ ನಿಧಿಗೆ ಪುನೀತ್ 50ಲಕ್ಷ ದೇಣಿಗೆ ನೀಡಿದ್ದರು.