ಚಿತ್ರದುರ್ಗ: ಜಿಲ್ಲೆಯ ಜವಗೊಂಡನಹಳ್ಳಿ ಉಪಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಹರೀಶ್ ಶನಿವಾರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಕೆ.ಸಿ.ಬೃಂದಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅ. 20 ರಂದು ಬೆಂಗಳೂರಿನಿಂದ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿಗೆ ಸಂಚರಿಸುವ ಮಾರ್ಗ ಮಧ್ಯೆ 22 ಸಾವಿರ ರೂ. ಮೌಲ್ಯದ ಮೊಬೈಲ್ ಅನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ 25ರಂದು ದೂರು ದಾಖಲಿಸಲಾಗಿತ್ತು.
ಮೊಬೈಲ್ ಹುಡುಕಿಸಿಕೊಡಲು ಯುವತಿಯ ತಂದೆ ಚಾಮರಾಜ ಅವರಿಗೆ ಕಾನ್ಸ್ಟೇಬಲ್ ಹರೀಶ್ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮೊದಲು 3 ಸಾವಿರ ರೂ. ನೀಡಿದ್ದು, ಮೊಬೈಲ್ ಕೈಸೇರಿದ ಬಳಿಕ ಉಳಿದ 2 ಸಾವಿರ ರೂ. ನೀಡುವುದಾಗಿ ತಿಳಿಸಿದ್ದರು. ಅದರಂತೆ ಹಣ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿಗಳಾದ ಜಿ.ಮಂಜುನಾಥ್, ಎನ್.ಮೃತ್ಯುಂಜಯ, ಪಿಐ ವೈ.ಎಸ್.ಶಿಲ್ಪಾ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು. ಪಿಐ ಬಿ.ಕೆ.ಲತಾ ತನಿಖೆ ಕೈಗೊಂಡಿದ್ದಾರೆ.