ನವದೆಹಲಿ: ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದಾಗಿ ನಿಧನರಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಪುವಿನೊಂದಿಗೆ ತಮ್ಮ ಒಡನಾಟ ಮತ್ತು ನೆನಪುಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಚಿತ್ರರಂಗದ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
“ವಿಧಿಯ ಕ್ರೂರ ಆಟ, ಪ್ರತಿಭಾವಂತ ಮತ್ತು ಉತ್ಸಾಹಶಾಲಿಯಾದ ನಟ ಪುನೀತ್ ರಾಜ್ಕುಮಾರ್ರನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಹೋಗುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಕೃತಿಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಜೊತೆಗೆ, ಪುನೀತ್ ಮತ್ತು ಅವರ ಪತ್ನಿ ಅಶ್ವಿನಿ ಅವರೊಂದಿಗಿನ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ವಿಧಿವಶ: ಭಾನುವಾರದವರೆಗೂ ಬಾರ್, ಪಬ್ಗಳು ಬಂದ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಕನ್ನಡ ನಟ ಪುನೀತ್ ರಾಜ್ಕುಮಾರ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾನ್ ಟೂ ಸೂನ್” ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್, ಆಂಧ್ರಪ್ರದೇಶದ ಮಾಜಿ ಸಿಎಂ ಜಿ.ಚಂದ್ರಬಾಬು ನಾಯ್ಡು ಮುಂತಾದವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
“ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ಆಘಾತ ತಂದಿದೆ. ನನಗೆ ಈಗಲೂ ಈ ಸುದ್ದಿಯನ್ನು ನಂಬಲು ಕಷ್ಟವಾಗುತ್ತಿದೆ. ನಾನು ಕಿರಿಯ ಸಹೋದರನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ನನ್ನ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ. ಅವರ ಕುಟುಂಬದೊಂದಿಗೆ ನಾನು ನಿಕಟ ಬಂಧವನ್ನು ಹಂಚಿಕೊಳ್ಳುತ್ತೇನೆ. ಈ ನಷ್ಟವನ್ನು ನಿಭಾಯಿಸುವ ಶಕ್ತಿ ಅವರಿಗೆ ಲಭಿಸಲಿ ಎಂದು ಬಯಸುತ್ತೇನೆ” ಎಂದು ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್ಲಾಲ್ ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬ ಮಲೆಯಾಳಂ ನಟ ಮಮ್ಮೂಟ್ಟಿ, ತೆಲುಗು ಸ್ಟಾರ್ ಚಿರಂಜೀವಿ, ಹಿಂದಿ ಚಿತ್ರ ನಿರ್ಮಾಪಕ ಬೋನಿ ಕಪೂರ್ ಸೇರಿದಂತೆ ದೇಶಾದ್ಯಂತದಿಂದ ಚಿತ್ರರಂಗದ ಗಣ್ಯರು ಪುನೀತ್ರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ