ಬೆಂಗಳೂರು: ಗಜಪಡೆ ಹೆಸರಿನ ಟ್ವಿಟರ್ ಖಾತೆಯಿಂದ “ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಆರ್’ಸಿಬಿ ಅನ್ ಬಾಕ್ಸ್ ಇವೆಂಟ್’ಗೆ ಇವರನ್ನು ಕರೆದಿದ್ದಕ್ಕೆ ಎಲ್ಲಾ ಮ್ಯಾಚ್ ಸೋಲುತ್ತಿದ್ದಾರೆ” ಎಂದು ಪೋಸ್ಟ್ ಮಾಡಲಾಗಿತ್ತು.
ಪೋಸ್ಟ್ ಜೊತೆಗೆ #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್ ಟ್ಯಾಗ್ ಸಹ ಹಾಕಲಾಗಿತ್ತು. ಆ ನಂತರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಕ್ಸ್ ಖಾತೆಯಲ್ಲಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಆರ್’ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ನಟ ದರ್ಶನ್ ಅಭಿಮಾನಿಗಳು ಆರೋಪಿಸಿದ್ದು, ಇದರಿಂದ ಬೇಸರಗೊಂಡ ಪುನೀತ್ ಅಭಿಮಾನಿಗಳು, ದರ್ಶನ್ ಅಭಿಮಾನಿ ಬಳಗದ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಸದ್ಯ ಈ ಪೋಸ್ಟ್ ವಿಚಾರ ನಟ ದರ್ಶನ್ ಗಮನಕ್ಕೂ ಬಂದಿದ್ದು, ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ ಈ ಪೋಸ್ಟ್ ಬಗ್ಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ(ರಿ)ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನೀತ್ ದರ್ಶನ್ ಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಅವಹೇಳನಕಾರಿ ಪೋಸ್ಟ್ ಬಗ್ಗೆ ದರ್ಶನ್ ಅವರ ಗಮನಕ್ಕೂ ಬಂದಿದೆ. ಅವರು ಕರೆ ಮಾಡಿ ಮಾತನಾಡಿದರು. “ಈ ರೀತಿ ಮಾಡುವುದು ತಪ್ಪು. ಬೇರೆ ಯಾರೋ ಬೇಕಂತಲೇ ಮಾಡಿ, ನಮ್ಮ ಮೇಲೆ ಹೇಳುತ್ತಿದ್ದಾರೆ. ಇದು ಯಾರು ಮಾಡಿದ್ದಾರೋ ಗೊತ್ತಿಲ್ಲ, ಈ ಬಗ್ಗೆ ವಿಚಾರಿಸಿ ಕ್ರಮಕೈಗೊಳ್ಳಿ ಎಂದು ದರ್ಶನ್ ತಿಳಿಸಿದ್ದಾರೆ ” ಎಂದು ಹೇಳಿದ್ದಾರೆ.
ಅಶ್ವಿನಿ ಪುನೀತ್ರಾಜಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಕಾನೂನು ಕ್ರಮಕ್ಕೆ ಮುಂದಾದ ಅಪ್ಪು ಅಭಿಮಾನಿಗಳು