ನಿಶಾಂತ್ ಕಿಲೆಂಜೂರು
ಬಡವರು ಹಾಗೂ ಶ್ರಮಿಕರಿಗೆ ಊಟ, ಉಪಹಾರ ಪೂರೈಸುವ ಮೂಲಕ ಅವರ ನೆಮ್ಮದಿಯ ಜೀವನಕ್ಕೆ ಕಾರಣವಾಗಿರುವ ಇಂದಿರಾ ಕ್ಯಾಂಟಿನ್ ಇದೀಗ ಕಿನ್ನಿಗೋಳಿಯಲ್ಲಿ ಪ್ರಾರಂಭವಾಗಲಿದೆ.
ಇಂದಿರಾ ಕ್ಯಾಂಟೀನ್ಗಾಗಿ 2023-24ರ ಅವಧಿಯಲ್ಲಿ 100 ಕೋಟಿ ರೂಪಾಯಿ ನೀಡಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ನೂತನ ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಲಿದೆ. ಬೆಳೆಯುತ್ತಿರುವ ಕಿನ್ನಿಗೋಳಿ ಪ್ರದೇಶಕ್ಕೆ ಇಂದಿರಾ ಕ್ಯಾಂಟಿನ್ ಅಗತ್ಯವಾಗಿದ್ದು, ಮಾರ್ಚ್ ಅಂತ್ಯದೊಳಗೆ ಪ್ರಾರಂಭವಾಗಲಿದೆ, ಅಧಿಕಾರಿಗಳು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅವರಣದೊಳಗೆ ಇದಕ್ಕಾಗಿ ಜಾಗ ಸೂಚಿಸಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಸಾರ್ವಜನಿಕರ ಅಪೇಕ್ಷೆಯಂತೆ ಇದನ್ನು ಬೇರೆಡೆ ಪ್ರಾರಂಬಿಸಲು ಜಮೀನು ಗುರುತಿಸಲಾಗಿದೆ.
ಪಂಚಾಯಿತಿ ಅವರಣದೊಳಗೆ ಕ್ಯಾಂಟಿನ್ ಪ್ರಾರಂಭಿಸಿದರೆ ಸಾರ್ವಜನಿಕರಿಗೆ ಇದರ ಉಪಯೋಗ ಸಿಗದು ಎಂಬ ಕಾರಣಕ್ಕಾಗಿ ಕಿನ್ನಿಗೋಳಿ ಪೇಟೆ ಮತ್ತು ಜನಸಂದಣಿ ಇರುವ ಜಾಗದಲ್ಲಿ ಇದನ್ನು ಪ್ರಾರಂಭಿಸಲು ಒಂದೆರಡು ಜಾಗವನ್ನು ಸೂಚಿಸಿದ್ದು, ಕೊನ್ಸೆಟಾ ಅಸ್ಪತ್ರೆಯ ಬಳಿ ಅಂದರೆ ಪ್ರಸ್ತುತ ಸಂತೆ ನಡೆಯುವ ಮುಂಭಾಗದಲ್ಲಿರುವ ಸರ್ಕಾರಿ ಜಾಗದಲ್ಲಿ ಕ್ಯಾಂಟಿನ್ ಆರಂಭವಾಗಲಿದೆ. ಸದ್ಯಕ್ಕೆ ಗ್ರಾಮಕರಣಿಕರಾದ ಸುಜಿತ್ ಮತ್ತು ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ಮುಗಿಸಿದ್ದು, ಒಂದೆರಡು ತಿಂಗಳಲ್ಲಿ ಕಿನ್ನಿಗೋಳಿಯ ಜನತೆಗೆ ಇಂದಿರಾ ಕ್ಯಾಂಟಿನ್ ಊಟ ಉಪಹಾರ ಸವಿಯಬಹುದಾಗಿದೆ.
ಕಿನ್ನಿಗೋಳಿಯಲ್ಲೂ ಇಂದಿರಾ ಕ್ಯಾಂಟಿನ್ ಆರಂಭವಾಗಲಿದ್ದು, ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ, ಕಿನ್ನಿಗೋಳಿ ಮೂರು ಕಾವೇರಿ ಮುಖ್ಯ ರಸ್ತೆಯ ಬದಿಯಲ್ಲಿ ಪ್ರಾರಂಭವಾಗಲಿದೆ, ಟೆಂಡರ್ ಪಡೆದುಕೊಂಡವರು ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿದರೂ ಊಟ ಉಪಾಹಾರದ ಲೆಕ್ಕಪತ್ರವನ್ನು ಪಟ್ಟಣ ಪಂಚಾಯಿತಿ ಮೂಲಕ ನೋಡಿಕೊಳ್ಳಲಾಗುದು.
-ನಾಗರಾಜ್ ಎಂ. ಎಲ್
ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕಿನ್ನಿಗೋಳಿ
ಬೆಳೆಯುತ್ತಿರುವ ಕಿನ್ನಿಗೋಳಿಗೆ ಇಂದಿರಾ ಕ್ಯಾಂಟಿನ್ ಅಗತ್ಯವಾಗಿದ್ದು ಇದರಿಂದ ಬಡ ಮತ್ತು ಶ್ರಮಿಕ ವರ್ಗದವರಿಗೆ ಅನುಕೂಲವಾಗಲಿದೆ, ಸಾರ್ವಜನಿಕರಿಗೆ ಉಪಯೋಗವಾಗುವ ಒಂದೆರಡು ಸ್ಥಳಗಳನ್ನು ಇಂದಿರಾ ಕ್ಯಾಂಟಿನ್ಗಾಗಿ ಗುರುತಿಸಿದ್ದು ಶೀಘ್ರದಲ್ಲಿ ಪ್ರಾರಂಭವಾಗಲಿದೆ.
-ಉಮಾನಾಥ ಕೋಟ್ಯಾನ್
ಶಾಸಕರು ಮೂಲ್ಕಿ-ಮೂಡುಬಿದಿರೆ