ನವದೆಹಲಿ: ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಧರಣಿಗಳಿಂದ ಜನರ ಸಂಚಾರಕ್ಕೆ ಉಂಟಾಗಿರುವ ತೊಂದರೆ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. “ಹೆದ್ದಾರಿಗಳನ್ನು ಅನಿಯಮಿತವಾಗಿ ಹೇಗೆ ಬ್ಲಾಕ್ ಮಾಡಲು ಸಾಧ್ಯ?” ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ದೆಹಲಿ ಮತ್ತು ಉತ್ತರಪ್ರದೇಶ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ಬ್ಲಾಕೇಡ್ ಆಗಿದೆ. ನಾಯ್ಡಾದಿಂದ ದೆಹಲಿ ತಲುಪಲು ಮುಂಚೆ 20 ನಿಮಿಷಗಳು ಸಾಕಿತ್ತು. ಆದರೆ ಈಗ 2 ಗಂಟೆ ಕಾಲ ಹಿಡಿಯುತ್ತಿದೆ. ಇದರಿಂದಾಗಿ ಈ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ. ಯುಪಿಗೇಟ್ನ ರಸ್ತೆ ತಡೆಯನ್ನು ತೆರವುಗೊಳಿಸಲು ಸರ್ಕಾರಕ್ಕೆ ಆದೇಶಿಸಬೇಕೆಂದು ನಾಯ್ಡ ನಿವಾಸಿ ಮೊನಿಕಾ ಅಗರ್ವಾಲ್ ಎಂಬುವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನಾನು ಸಚಿವನಾಗಿದ್ದಾಗ ರೌಡಿಗಳು ಹೆದರುತ್ತಿದ್ದರು: ಮಾಜಿ ಸಚಿವ ಯು.ಟಿ. ಖಾದರ್..
ಈ ಅರ್ಜಿಯ ವಿಚಾರಣೆ ವೇಳೆ, ಸರ್ಕಾರಕ್ಕೆ ಈ ಪ್ರತಿಭಟನಾ ಧರಣಿಗಳನ್ನು ಅಂತ್ಯಗೊಳಿಸಲು ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ನ್ಯಾಯಪೀಠ ಕೇಳಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು ಪ್ರತಿಭಟಿಸುತ್ತಿರುವ ರೈತರನ್ನು ಮಾತುಕತೆಗೆ ಆಹ್ವಾನಿಸಲಾಗಿದೆ. ಆ ಬಗ್ಗೆ ಅಫಿಡೆವಿಟ್ನಲ್ಲಿ ವಿವರ ನೀಡಲಾಗಿದೆ ಎಂದರು.
“ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಪ್ರತಿಭಟನೆ ಮುಖಾಂತರ ಅಥವಾ ಸಂಸದೀಯ ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆದರೆ ಹೆದ್ದಾರಿಗಳನ್ನು ಹೇಗೆ ಬ್ಲಾಕ್ ಮಾಡಲು ಸಾಧ್ಯ, ಇದು ಅನಿಯಮಿತವಾಗಿ ನಡೆಯಲು ಸಾಧ್ಯವಿಲ್ಲ. ಇದು ಎಲ್ಲಿ ಮುಗಿಯುತ್ತದೆ” ಎಂದು ನ್ಯಾಯಾಲಯ ಪ್ರಶ್ನಿಸಿತು. ಜೊತೆಗೇ, ರಸ್ತೆ ತೆರವಿಗೆ ಆಗ್ರಹಿಸಿರುವ ಈ ಅರ್ಜಿಯಲ್ಲಿ ಪ್ರತಿಭಟನಾನಿರತ ರೈತ ಸಂಘಟನೆಗಳನ್ನು ಪ್ರತಿವಾದಿಗಳನ್ನು ಮಾಡಲು ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಅನುಮತಿ ನೀಡಿತು. (ಏಜೆನ್ಸೀಸ್)
ಅನಗತ್ಯ ಪ್ರಯಾಣ ಬೇಡ, ಆನ್ಲೈನ್ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ
ಫ್ರಾನ್ಸ್ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಜಿಗೆ 1 ವರ್ಷ ಜೈಲು ಶಿಕ್ಷೆ