ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶ ದುರುಪಯೋಗಪಡಿಸಿಕೊಂಡಿದ್ದ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್ನನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
2021ರ ಸೆ.17ರಿಂದ 21ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ-ಖಾತಾ ವಿತರಿಸಲಾಗಿತ್ತು.
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ, ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಸೈಬರ್ ಪೊಲೀಸರು, ರಾಮನಗರ ಜಿಲ್ಲೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಭರತ್ನನ್ನು ಬಂಧಿಸಿದ್ದರು.
ಇತ್ತ ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕುಳಿತು ಲಾಗಿನ್ ಆಗಿ ಅಕ್ರಮವಾಗಿ ಇ-ಖಾತಾ ಮಾಡಿಕೊಂಡಿದ್ದ ಕಿಂಗ್ಪಿನ್ ರವಿಕುಮಾರ್, ಭೂಗತನಾಗಿದ್ದ. ಕೆಲಸಕ್ಕೆ ರಜೆ ಸಲ್ಲಿಸಿ ತಲೆಮರೆಸಿಕೊಂಡಿರುವ ರವಿಕುಮಾರ್, ಕರ್ತವ್ಯಕ್ಕೆ ಹಾಜರಾಗಿಲ್ಲ. ಪೊಲೀಸರು ಬಂಧನಕ್ಕೆ ಬಲೆಬೀಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಮನಗರ ಜಿಲ್ಲಾ ಪಂಚಾಯತಿ ಸಿಇಒ ವಿಕ್ರಮ್, ಪಿಡಿಒ ರವಿಕುಮಾರ್ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹಾರೋಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್, ಡಾಂಗಲ್ ದುರುಪಯೋಗ ಆಗಿರುವುದು ಸಹ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಲ್ಲದೆ, ಬೆಂಗಳೂರು ದಕ್ಷಿಣ ತಾಲೂಕಿನ ತರಳು, ಸೋಮನಹಳ್ಳಿ, ಕುಂಬಳಗೋಡು ಗ್ರಾಮ ಪಂಚಾಯಿತಿ ಸೇರಿದಂತೆ ಹಲವೆಡೆ ಸಹ ಇ-ಸ್ವತ್ತು ತಂತ್ರಾಂಶ ದುರುಪಯೋಗಪಡಿಸಿಕೊಂಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಖಾಕಿಪಡೆ ಬಲೆಬೀಸಿದೆ.
ರೌಡಿಯ ಹೆಂಡ್ತಿಗೇ ಮೆಸೇಜ್ ಮಾಡ್ತಿದ್ದ ಕಿಡಿಗೇಡಿ!; ಬಳಿಕ ರಸ್ತೆಯಲ್ಲಿದ್ದ ವಾಹನಗಳ ಗಾಜು ಪುಡಿಪುಡಿ..