ಬೆಳಗಾವಿ: ತಾಲೂಕಿನ ಬಿಜಗರ್ಣಿ ಗ್ರಾಮದ 72 ಎಕರೆ ಗೋಮಾಳ ಜಮೀನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಗ್ರಾಮದ ಜಾನುವಾರುಗಳಿಗೆ ಮೇಯಿಸಲು ಬಿಜಗರ್ಣಿ ಗ್ರಾಮದಲ್ಲಿ 72 ಎಕರೆ ಗೋಮಾಳ ಜಮೀನು ಮೀಸಲಿಟ್ಟಿದ್ದು, ಇಲ್ಲಿ ಜಾನುವಾರುಗಳನ್ನು ಮೇಯಿಸಲು ಗ್ರಾಮಸ್ಥರಿಗೆ ಅಧಿಕಾರವಿದೆ. ಜಮೀನನ್ನು ಗೋಮಾಳ ಎಂದೇ ಉಪಯೋಗಿಸುವಂತೆ ನ್ಯಾಯಾಲಯ ತಿಳಿಸಿದೆ. ಆದರೆ, ಈ ಗೋಮಾಳದ ಜಮೀನನ್ನು ಅತಿಕ್ರಮಣ ಮಾಡಲಾಗುತ್ತಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಮಾಳ ಜಮೀನು ಅತಿಕ್ರಮಣ ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅತಿಕ್ರಮಣ ಮಾಡಿರುವ ಜಮೀನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಜೂ. 29ರಂದು ಗೋಮಾಳ ಜಮೀನಿನಲ್ಲಿ ಗ್ರಾಮಸ್ಥರೆಲ್ಲ ಜಾನುವಾರು ಮೇಯಿಸಲು ನಿರ್ಧರಿಸಿದ್ದೇವೆ. ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಲ್ಲಪ್ಪ ಬೆಳಗಾಂವಕರ, ದಾಮೋದರ ಮೋರೆ, ವಸಂತ ಅಸ್ತೆಕರ, ಜಕ್ಕಪ್ಪ ಮೋರೆ, ಯಶವಂತ ಜಾಧವ, ಮಾರುತಿ ಜಾಧವ, ವಿಶ್ವರಾಜ, ಶಿವಾಜಿ, ಮತ್ತಿತರರಿದ್ದರು.