ನವದೆಹಲಿ: ದೇಶದಲ್ಲಿ ಭಾರೀ ಸದ್ದು ಮಾಡಿದ ಐಫೋನ್ ಹ್ಯಾಕಿಂಗ್ ಪ್ರಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಆ್ಯಪಲ್ ಕಂಪನಿಯ ಅಧಿಕಾರಿಗಳಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ಬುಧವಾರ (ನ.01) ವರದಿಯಾಗಿದೆ.
ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ಕಾಂಗ್ರೆಸ್ ಸಂಸದ ಶಶಿ ತರೂರ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಿಯಾಂಕಾ ಚೆತುರ್ವೇದಿ (ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ), ಅಸಾದುದ್ದೀನ್ ಒವೈಸಿ (ಲೋಕಸಭಾ ಸದಸ್ಯ, ಎಐಎಂಐಎಂ), ರಾಘವ್ ಚಡ್ಡಾ (ಆ್ಯಪ್ ಪಕ್ಷದ ರಾಜ್ಯಸಭಾ ಸದಸ್ಯ) ಮತ್ತು ಐಎನ್ಸಿ ವಕ್ತಾರರಾದ ಪವನ್ ಖೇರಾ ಮತ್ತು ಸುಪ್ರಿಯಾ ಶ್ರೀನಾಥೆ ಅವರುಗಳಿಗೆ ಸೋಮವಾರ ರಾತ್ರಿ ಆ್ಯಪಲ್ ಕಂಪನಿಯಿಂದ ಎಚ್ಚರಿಕೆ ಸಂದೇಹಗಳು ಹೋಗಿದ್ದು, ಇದು ಸರ್ಕಾರಿ ಪ್ರಾಯೋಜಕತ್ವದ ಹ್ಯಾಕಿಂಗ್ ಯತ್ನ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ನಯವಾಗಿ ತಿರಸ್ಕರಿಸಿದೆ.
ಸಂಸದೀಯ ಸ್ಥಾಯಿ ಸಮಿತಿಯ ಕಾರ್ಯದರ್ಶಿ ಅವರು ಈ ಪ್ರಕರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ವಿಷಯವನ್ನು ‘ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಬರುವ ಸಭೆಯಲ್ಲಿ ಆ್ಯಪಲ್ ಅಧಿಕಾರಿಗಳನ್ನು ಕರೆಸಿಕೊಂಡು ಪ್ರತಿಪಕ್ಷದ ನಾಯಕರು ಮತ್ತು ದೇಶದ ಇತರ ಸಾರ್ವಜನಿಕ ವ್ಯಕ್ತಿಗಳಿಗೆ ಅವರ ಐಫೋನ್ಗಳಲ್ಲಿ ನಡೆದಿದೆ ಎನ್ನಲಾದ ಹ್ಯಾಕಿಂಗ್ ದಾಳಿಯ ಕುರಿತು ಸ್ಪಷ್ಟನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಎಚ್ಚರಿಕೆ ಸಂದೇಶದಲ್ಲಿ ಏನಿದೆ?
ನಮ್ಮ ಮೇಲೆ ಸರ್ಕಾರಿ ಪ್ರಯೋಜಿತ ಹ್ಯಾಕಿಂಗ್ ಪ್ರಯತ್ನ ನಡೆದಿರಬಹುದು ಎಂದು ಪ್ರತಿಪಕ್ಷಗಳ ನಾಯಕರು ಸಂಶಯ ವ್ಯಕ್ತಪಡಿಸಿದ್ದಾರೆ. ಆ್ಯಪಲ್ ಕಂಪನಿಯು ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಿದೆ ಮತ್ತು ಇತ್ತೀಚಿನ iOS 17.1 ಅಪ್ಡೇಟ್ಗೆ ಮೊಬೈಲ್ ಅನ್ನು ಅಪ್ಗ್ರೇಡ್ ಮಾಡಲು ಒತ್ತಾಯಿಸಿದೆ. ಏಕೆಂದರೆ, ಅಪ್ಗ್ರೇಡ್ ಮಾಡದಿದ್ದರೆ, ಅದು ಭದ್ರತಾ ಲೋಪದೋಷಗಳನ್ನು ಪ್ಲಗ್ ಮಾಡುವ ಹಲವಾರು ಸೆಕ್ಯುರಿಟಿ ಪ್ಯಾಚ್ಗಳನ್ನು ಹೊಂದಿದ್ದು, ಐಫೋನ್ ಹ್ಯಾಕ್ಗೆ ಅನುಮತಿಸಬಹುದು ಎಂಬುದು ಎಚ್ಚರಿಕೆ ಸಂದೇಶದಲ್ಲಿದೆ.
ಆ್ಯಪಲ್ ಸ್ಪಷ್ಟನೆ ಏನು?
ಯಾವುದೇ ನಿರ್ದಿಷ್ಟ ಸರ್ಕಾರ ಪ್ರಾಯೋಜಿತ ಹ್ಯಾಕಿಂಗ್ ಬೆದರಿಕೆ ನೋಟಿಫಿಕೇಶನ್ಗಳ ಬಗ್ಗೆ ಆ್ಯಪಲ್ ಕಂಪನಿ ಆರೋಪ ಮಾಡುವುದಿಲ್ಲ. ಸರ್ಕಾರ ಪ್ರಾಯೋಜಿತ ಹ್ಯಾಕರ್ಗಳು ಉತ್ತಮ ಹಣ ಮತ್ತು ಅತ್ಯಾಧುನಿಕರಾಗಿರುತ್ತಾರೆ. ಈ ಹ್ಯಾಕರ್ಗಳ ದಾಳಿಗಳು ಕಾಲಾನಂತರದಲ್ಲಿ ವಿಕಸನಗೊಳ್ಳುತ್ತವೆ. ಇಂತಹ ಹ್ಯಾಕರ್ಗಳನ್ನು ಪತ್ತೆಹಚ್ಚುವುದು ಸಾಮಾನ್ಯವಾಗಿ ಅಪೂರ್ಣ ಮತ್ತು ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಕೆಲವು ಆ್ಯಪಲ್ ಬೆದರಿಕೆ ನೋಟಿಫಿಕೇಶನ್ಗಳು ತಪ್ಪು ಎಚ್ಚರಿಕೆ ಸಂದೇಶಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯೂ ಇದೆ. ಬೆದರಿಕೆ ನೋಟಿಫಿಕೇಶನ್ಗಳು ಬರಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ತಮ್ಮ ನಡವಳಿಕೆಯನ್ನು ಹೊಂದಿಕೊಳ್ಳಲು ಮಾಹಿತಿ ಸಹಾಯ ಮಾಡಬಹುದು ಎಂದು ಆ್ಯಪಲ್ ಕಂಪನಿ ಹೇಳಿದೆ.
ಆ್ಯಪಲ್ ಸುಮಾರು 150 ರಾಷ್ಟ್ರಗಳಿಗೆ ಹ್ಯಾಕ್ ಆಗುವ ಅಪಾಯದಲ್ಲಿರುವ ಜನರಿಗೆ ಇದೇ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. 2021ರಲ್ಲಿ ಪೆಗಾಸೆಸ್ ಸ್ಪೈವೇರ್ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಫೀಚರ್ನಲ್ಲಿ ಲಾಕ್ಡೌನ್ ಮೋಡ್ ಪರಿಚಯಿಸಿತ್ತು. ಈ ಫೀಚರ್ ಹ್ಯಾಕರ್ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಟ್ಯಾಚ್ಮೆಂಟ್ಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ಸದ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹ್ಯಾಕಿಂಗ್ ಸುದ್ದಿ ಸದ್ದು ಮಾಡುತ್ತಿದ್ದು, ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
INDIA ಒಕ್ಕೂಟದ ನಾಯಕರ ಐಫೋನ್ ಹ್ಯಾಕ್ ಯತ್ನ ಪ್ರಕರಣ: ಆ್ಯಪಲ್ ಕೊಟ್ಟ ಸ್ಪಷ್ಟನೆ ಹೀಗಿದೆ…
INDIA ಒಕ್ಕೂಟದ ನಾಯಕರ ಐಫೋನ್ ಹ್ಯಾಕ್ ಯತ್ನ; ಕಂಪನಿಯ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡ ಪ್ರತಿಪಕ್ಷ ಸಂಸದರು
ಆ್ಯಪಲ್ ಫೋನ್ ಹ್ಯಾಕಿಂಗ್ ಪ್ರಯತ್ನ; ಐಫೋನ್, ಐಪ್ಯಾಡ್ನಲ್ಲಿ ಲಾಕ್ಡೌನ್ ಮೋಡ್ ಆನ್ ಮಾಡುವುದು ಹೇಗೆ?