ನವದೆಹಲಿ: ಐಫೋನ್ಗಳ ಸಂಭಾವ್ಯ ಹ್ಯಾಕಿಂಗ್ ಕುರಿತಾಗಿ ಆ್ಯಪಲ್ ಕಂಪನಿಯು ಎಸ್ಎಂಎಸ್ ಹಾಗೂ ಇಮೇಲ್ ಮೂಲಕ ಎಚ್ಚರಿಕೆ ನೀಡಿರುವುದಾಗಿ ವಿರೋಧ ಪಕ್ಷಗಳ ಸಂಸದರಾದ ಶಶಿ ತರೂರ್, ಪ್ರಿಯಾಂಕ ಚತುರ್ವೇದಿ, ಅಸಾದುದ್ದೀನ್ ಓವೈಸಿ, ಹಾಗೂ ಮಹುವಾ ಮೊಯಿತ್ರಾ ತಮ್ಮ ಸಾಮಾಜಿಕ ಜಾಲತಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿಪಕ್ಷಗಳ ಐವರು ಸಂಸದರು ತಾವು ಆಪಲ್ನಿಂದ ಸ್ವೀಕರಿಸಿದ, ತಮ್ಮ ಐಫೋನ್ಗಳನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರು ದೂರದಿಂದಲೇ ಹ್ಯಾಕ್ ಮಾಡಲು ಪ್ರಯತ್ನಿಸಬಹುದು ಎಂಬ ಎಚ್ಚರಿಕೆ ಸಂದೇಶವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಸಾಕಷ್ಟು ಭದ್ರತೆ ಸೌಲಭ್ಯಗಳನ್ನು ಹೊಂದಿರುವ ಆ್ಯಪಲ್ ಐಫೋನ್ಗಾಗಿ ಕಂಪನಿ ಹೊಸದಾಗಿ ಬಿಡುಗಡೆ ಮಾಡಿರುವ 17.1 IOSಗೆ ಅಪ್ಗ್ರೇಡ್ ಆಗಿ ಲಾಕ್ಡೌನ್ ಮೋಡ್ ಆನ್ ಮಾಡಿಕೊಳ್ಳುವಂತೆ ಮೆಸ್ಸೇಜ್ನಲ್ಲಿ ಸೂಚಿಸಲಾಗಿದೆ.
ಇಂಡಿಯಾ ಒ್ಕಕೂಟದ ಪ್ರಮುಖ ನಾಯಕರಾದ ಶಶಿ ತರೂರ್, ಮಹುವಾ ಮೊಯಿತ್ರಾ, ರಾಘವ್ ಚಡ್ಡಾ, ಪ್ರಿಯಾಂಕ ಚತುರ್ವೇದಿ, ಅಸಾದುದ್ದೀನ್ ಓವೈಸಿ ಸೇರಿದಂತೆ ವಿರೋಧ ಪಕ್ಷಗಳ ಅನೇಕ ನಾಯಕರ ಐಫೋನ್ಗಳ ಹ್ಯಾಕಿಂಗ್ಗೆ ಪ್ರಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.
2021ರಲ್ಲಿ ಪೆಗ್ಗಾಸೆಸ್ ಸ್ಪೈವೇರ್ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಫೀಚರ್ನಲ್ಲಿ ಲಾಕ್ಡೌನ್ ಮೋಡ್ ಪರಿಚಯಿಸಿತ್ತು. ಈ ಫೀಚರ್ ಹ್ಯಾಕರ್ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಟ್ಯಾಚ್ಮೆಂಟ್ಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಅನ್ನು ಗುರಿಯಾಗಿಸಬಹುದು- ನಿಮ್ಮ Apple ID ಯೊಂದಿಗೆ ಸಂಬಂಧಿಸಿರುವ iPhone ಅನ್ನು ರಿಮೋಟ್ ಆಗಿ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದು Apple ನಂಬುತ್ತಿದೆ. ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಫೋನ್ ಗೆ ಪ್ರವೇಶ ಮಾಡಿದರೆ, ಅವರು ನಿಮ್ಮ ಸೂಕ್ಷ್ಮ ಸಂವಹನಕ್ಕೆ ಸಂಬಂಧಿಸಿದ ಡೇಟಾ, ಕ್ಯಾಮರಾ ಅಥವಾ ಮೈಕ್ರೊಫೋನ್ಗಳನ್ನು ದೂರದಿಂದಲೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.