ಇಸ್ಲಾಮಾಬಾದ್: ನೆರೆಯ ನೇಪಾಳ ಮಾಡಿದ ಕೃತ್ಯವನ್ನೇ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿದ್ದಾರೆ. ನಯಾ ಪಾಕಿಸ್ತಾನ್ ಹೆಸರಿನಲ್ಲಿ ಭಾರತದ ಅಧೀನದಲ್ಲಿರುವ ಭೂಭಾಗವನ್ನು ಒಳಗೊಂಡಂತೆ ಹೊಸ ನಕ್ಷೆ ಬಿಡುಗಡೆಗೊಳಿಸಿದ್ದಾರೆ. ಇದು ಪಾಕ್ ಪರಿತಪಿಸಲೇಬೇಕಾದ ಕೃತ್ಯ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಪಾಕಿಸ್ತಾನದಿಂದ ಇಂಥ ಕೃತ್ಯ ಇದೇ ಮೊದಲೇನಲ್ಲ, 1947-48ರಲ್ಲಿ ಮಹಮ್ಮದ್ ಅಲಿ ಜಿನ್ನಾ ಆಡಳಿತಾವಧಿಯಲ್ಲೂ ಬಿಡುಗಡೆಯಾಗಿದ್ದವು. ಸದ್ಯ ಇಮ್ರಾನ್ ಖಾನ್ ಬಿಡುಗಡೆ ಮಾಡಿರುವ ಹೊಸ ನಕ್ಷೆ ಸಂಪೂರ್ಣ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶ ಎಂದು ತೋರಿಸಲಾಗಿದೆ. ಮಾತ್ರವಲ್ಲದೇ, ಗುಜರಾತ್ನ ಜುನಾಘಡ್ ಭಾಗವನ್ನು ಪಾಕ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ; ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ
ರಾಜಕೀಯ ಉದ್ದೇಶಗಳೊಂದಿಗೆ ಜನರನ್ನು ಮರಳು ಮಾಡಲು ಇದನ್ನು ಬಿಡುಗಡೆ ಮಾಡಲಾಗಿದ್ದರೂ, ಇದರಿಂದಾಗುವ ಪರಿಣಾಮಗಳಿಗೆ ಪಾಕ್ ಬೆಲೆ ತೆರಲೇಬೇಕಾಗುತ್ತದೆ. ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತೆ ಬೇಕು ಎಂದು ಹೋರಾಡುತ್ತಿರುವ ಪ್ರತ್ಯೇಕತಾವಾದಿಗಳ ಶವ ಪೆಟ್ಟಿಗೆ ಮೇಲೆ ಕೊನೆಯ ಮೊಳೆ ಹೊಡೆದಂತಾಗಿದೆ. ಏಕೆಂದರೆ, ಈ ನಕ್ಷೆ ಪ್ರಕಾರ ಜಮ್ಮು ಕಾಶ್ಮೀರ ಸಂಪೂರ್ಣವಾಗಿ ಅವರದ್ದು…! ಇದಲ್ಲದೇ, ಗಿಲ್ಗಿಟ್- ಬಾಲ್ಟಿಸ್ತಾನ್ ಪರ್ವತ ಪ್ರದೇಶದಲ್ಲಿ ಪ್ರತ್ಯೇಕ ಆಡಳಿತ ಹೊಂದಬೇಕೆಂಬ ಸ್ಥಳೀಯರ ಕನಸು ನುಚ್ಚುನೂರಾಗಿದೆ…!
ಇದಷ್ಟೇ ಅಲ್ಲ, ಗಡಿ ವಿಚಾರದಲ್ಲಿ ಯಾವುದೇ ವಿಚಾರವನ್ನು ದ್ವಿಪಕ್ಷೀಯ ಮಾತುಕತೆ ಬಗೆಹರಿಸಿಕೊಳ್ಳುವ 1972 ಹಾಗೂ 1999ರ ಒಪ್ಪಂದವನ್ನು ಪಾಕ್ ನಿರಾಕರಿಸಿದಂತಾಗಿದೆ. ಉಳಿದ ದ್ವಿಪಕ್ಷೀಯ ಒಪ್ಪಂದಗಳು ಕೂಡ ಇದೇ ಹಾದಿ ಹಿಡಿಯಲಿವೆ. ಉದಾಹರಣೆಗೆ ಇಂಡಸ್, ಝೀಲಂ, ಚೇನಾಬ್ ನದಿ ನೀರು ಬಳಸಿಕೊಳ್ಳುವ ಪಾಕ್ ಅವಕಾಶ ಹಾಗೂ ಬಿಯಾಸ್, ರಾವಿ, ಸತ್ಲೇಜ್ ನದಿ ನೀರು ಬಳಸುವ ಹಕ್ಕು ಭಾರತಕ್ಕೆ ನೀಡುವ 1960ರ ಇಂಡಸ್ ಜಲ ಒಪ್ಪಂದವೂ ಮುರಿದು ಬಿದ್ದಂತಾಗಲಿದೆ.
ಇದರಿಂದ ಅರ್ಥವಾಗುವ ಇನ್ನೊಂದು ಅಂಶವೆಂದರೆ, ನಕ್ಷೆಯಲ್ಲಿ ಚೀನಾ ತಂಟೆಗೆ ಪಾಕಿಸ್ತಾನ ಹೋಗಿಯೇ ಇಲ್ಲ. ನಯಾ ಪಾಕಿಸ್ತಾನ್ ನಕ್ಷೆಯನ್ನು ರಾಜಕೀಯ ಅಸಂಬದ್ಧತೆ ಎಂದು ಭಾರತ ವ್ಯಾಖ್ಯಾನಿಸಿದೆ.
ಇದನ್ನೂ ಓದಿ; ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…!
ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪರವಾಗಿ ಬೆಂಬಲ ಗಿಟ್ಟಿಸಲು ವಿಫಲವಾದ ಪಾಕಿಸ್ತಾನ ಈ ಕೃತ್ಯಕ್ಕೆ ಕೈ ಹಾಕಿದೆ ಎಂದೇ ವಿಶ್ಲೇಷಿಸಲಾಗಿದೆ.