ವಿಜಯವಾಡ: ಆಂಧ್ರ ಪ್ರದೇಶದ ಮೊಘಲ್ರಾಜ್ಪುರಂನಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ವಿಜಯವಾಡ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಐವರು ಆರೋಪಿಗಳನ್ನು ಸೆಪ್ಟೆಂಬರ್ 17ರಂದು ಬಂಧಿಸಿದ್ದಾರೆ.
ಸೆ. 14ರಂದು ಮುಸುಕುಧಾರಿ ವ್ಯಕ್ತಿಗಳು ವಿಜಯವಾಡದ ಮೊಘಲ್ರಾಜ್ಪುರಂ ಏರಿಯಾದಲ್ಲಿರುವ ವೈದ್ಯರ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿ 50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದರು. ಇದೀಗ ಐವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಈ ಬಗ್ಗೆ ಮಾತನಾಡಿರುವ ವಿಜಯವಾಡ ಪೊಲೀಸ್ ಆಯುಕ್ತ ಬಿ. ಶ್ರೀನಿವಾಸಲು, ತನಿಖೆ ನಡೆಸಿ 8 ಮಂದಿಯ ಗ್ಯಾಂಗ್ನಲ್ಲಿ ಐವರನ್ನು ಬಂಧಿಸಲಾಗಿದೆ. ಬಂಧಿತರನ್ನು ನಾಗೇಂದ್ರ, ಜಾನ್ ವೆಸ್ಲಿ, ಸಾಯಿ ಕಿರಣ್, ಅಖಿಲ್ ಮತ್ತು ಎಂ. ವಿಜಯ್ ಎಂದು ಗುರುತಿಸಲಾಗಿದೆ. ಎಲ್ಲರೂ ಸಹ ಕೃಷ್ಣ ಮತ್ತು ಗುಂಟೂರು ಮೂಲದವರಾಗಿದ್ದು, ಕೆಲ ಪ್ರಕರಣಗಳಲ್ಲಿ ಈ ಹಿಂದೆಯೇ ಭಾಗಿಯಾಗಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಟ್ಟಿಂಗ್ ಮಾಡಿ ಲೈಫ್ ಹಾಳು ಮಾಡಿಕೊಳ್ಳಬೇಡಿ … ಅಭಿಮಾನಿಗಳಿಗೆ ದರ್ಶನ್ ಸಲಹೆ
ಸೆ. 14ರ ಮಧ್ಯಾಹ್ನ 3.30 ಮತ್ತು 4 ಗಂಟೆ ನಡುವಿನ ಸಮಯದಲ್ಲಿ ಡಾ. ಮುರಳೀಧರ್ ಅವರ ಮನೆ ಹೊಕ್ಕಿದ ಸುಲಿಗೆಕೋರರು. ವೈದ್ಯರ ಪತ್ನಿ ಮತ್ತು ಮಗನನ್ನು ಕಟ್ಟಿಹಾಕಿ ನಗದು ಮತ್ತು ಚಿನ್ನಾಭರಣವನ್ನು ದೋಚಿದ್ದರು. ಮನೆಯಲ್ಲಿ ಅಳುವ ಧ್ವನಿ ಕೇಳಿ ನೆರವಿಗೆ ಸ್ಥಳೀಯರು ಧಾವಿಸಿದಾದರೂ ಅಷ್ಟರಲ್ಲೇ ಖದೀಮರು ಪರಾರಿಯಾಗಿದ್ದರು. ಬಳಿಕ ದೂರು ನೀಡಲಾಗಿತ್ತು.
ದೂರಿನ ಆಧಾರದ ಮೇಲೆ ಮನೆಯ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಡಾ. ಮುರುಳಿಧರ್ ಬಳಿ ಪಿಆರ್ಒ ಆಗಿ ಕೆಲಸ ಮಾಡುವ ವಿಜಯ್ ದರೋಡೆಗೂ ಮುಂಚೆ ಡಾಕ್ಟ ರ್ ಪತ್ನಿಗೆ ಕರೆ ಮಾಡಿರುವುದು ಬಯಲಾಗಿದೆ. ಇದೇ ಆಧಾರದ ಮೇಲೆ ವಿಜಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ ಆತ ನಾಲ್ವರು ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಿದ್ದ.
ಆರೋಪಿಗಳ ಬಳಿ 34.75 ಲಕ್ಷ ರೂ. ನಗದು ಮತ್ತು ಕೆಲ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)