ಚನ್ನಪಟ್ಟಣ: ‘ಏನೂ ಅರಿಯದ ಕಂದನಿಗೆ ಇದೆಂಥ ಘೋರ ಶಿಕ್ಷೆ! ಅಯ್ಯೋ, ವಿಧಿಯೇ ಸಾಕು ನಿಲ್ಲಿಸು…’ ಹೀಗೆಂದು ಆ ವಿಧಿಯನ್ನೊಮ್ಮೆ ಶಪಿಸಿಬಿಡ್ತೀರಿ ಈ ಸ್ಟೋರಿ ನೋಡಿದ್ರೆ.
ಇಡೀ ಜಗತ್ತನ್ನೇ ಮೂರಾಬಟ್ಟೆಯನ್ನಾಗಿ ಮಾಡುತ್ತಿದೆ ಕೋವಿಡ್19. ರಕ್ತ ಸಂಬಂಧಿಕರು-ನೆರೆಹೊರೆಯವರನ್ನೂ ಪರಸ್ಪರ ದೂರವಾಗಿಸುತ್ತಿರುವ ಕರೊನಾ ಸೋಂಕಿನ ಮುಂದೆ ಮಾನವೀಯತೆ ಮಂಡಿಯೂರಿದೆ. ಇದು ಚನ್ನಪಟ್ಟಣದ ಟಿಪ್ಪುನಗರದ ಒಂದೂವರೆ ವರ್ಷದ ಮಗುವಿನ ವಿಷಯದಲ್ಲೂ ಬಿನ್ನವಾಗಿಲ್ಲ. ಮಗುವಿನ ಅಮ್ಮ, ಅಪ್ಪ, ಅಜ್ಜಿಗೂ ಕರೊನಾ ಸೋಂಕಿದೆ. ಆದರೆ, ಪುಟ್ಟಮಗುವಿಗೆ ಸೋಂಕು ಇಲ್ಲ. ಆದರೂ ಈ ಮಗುವಿಗೆ ಯಾರೊಬ್ಬರೂ ಆಶ್ರಯ ನೀಡುತ್ತಿಲ್ಲ. ತನ್ನ ಮನೆಯಲ್ಲಿ ಇರೋಣ ಎಂದರೂ ಅಕ್ಕಪಕ್ಕದ ನಿವಾಸಿಗಳು ಅದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಮುಂದೇನಾಯ್ತು ಗೊತ್ತಾ?
ಇದನ್ನೂ ಓದಿರಿ ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?
ಚನ್ನಪಟ್ಟಣದ ಟಿಪ್ಪುನಗರ ಬಳಿಯ ಬಿಸ್ಮಿಲಾನಗರದ ಗರ್ಭಿಣಿಯೊಬ್ಬರಿಗೆ ಜೂ.22ರಂದು ಕರೊನಾ ಸೋಂಕು ದೃಢಪಟ್ಟಿತ್ತು. ನಗರ ಪ್ರದೇಶದ ಮೊದಲ ಸೋಂಕಿತ ಪ್ರಕರಣ ಇದಾಗಿದೆ. ಸೋಂಕಿತ ಗರ್ಭಿಣಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಈಕೆಯ ಪತಿ, ತಾಯಿ ಹಾಗೂ ಒಂದೂವರೆ ವರ್ಷದ ಮಗುವನ್ನು ಹೊನ್ನನಾಯಕನಹಳ್ಳಿಯ ಕ್ವಾರಂಟೆನ್ ಕೇಂದ್ರದಲ್ಲಿ ಇಡಲಾಗಿತ್ತು. ಸೋಂಕಿತೆಯನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ.
ಸೋಂಕಿತ ಮಹಿಳೆಯ ಪತಿ ಹಾಗೂ ತಾಯಿಗೂ ಕರೊನಾ ಇರುವುದು ಗುರುವಾರ ದೃಢಪಟ್ಟಿದೆ. ಮಗುವಿನ ವರದಿ ನೆಗೆಟಿವ್ ಬಂದಿದೆ. ಸೋಂಕು ಇಲ್ಲ ಎಂದರೂ ಮಗುವನ್ನು ಕರೆದುಕೊಳ್ಳಲು ಯಾವೊಬ್ಬ ಸಂಬಂಧಿಕರೂ ಮುಂದೆ ಬರಲಿಲ್ಲ.
ಇದನ್ನೂ ಓದಿರಿ ಕೋವಿಡ್ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್ಡೌನ್ ಬೇಡ: ಪ್ರತಾಪ್ಸಿಂಹ
ಮಗುವಿನ ತಂದೆಗೆ ಸೋಂಕು ಪ್ರಾಥಮಿಕ ಹಂತದಲ್ಲಿದೆ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ, ವಿಶೇಷ ಪ್ರಕರಣ ಎಂದು ಭಾವಿಸಿ ಅಧಿಕಾರಿಗಳು, ಆ ಮಗುವನ್ನು ಅಪ್ಪನ ಜತೆಯಲ್ಲೇ ಮನೆಯಲ್ಲಿ ಇರುವಂತೆ ವ್ಯವಸ್ಥೆ ಕಲ್ಪಿಸಿದ್ದರು. ಅದರಂತೆ ತಂದೆ ಮತ್ತು ಮಗು ಬಿಸ್ಮಿಲಾನಗರದ ಮನೆಗೆ ಬಂದಿದ್ದರು.
ಆಗ ಮತ್ತೊಂದು ಸಮಸ್ಯೆ ಉದ್ಭವಿಸಿತು. ತಂದೆ ಮತ್ತು ಮಗು ಇಬ್ಬರೂ ಅವರ ಮನೆಯಲ್ಲೂ ಇರಬಾರದು ಎಂದು ಸ್ಥಳೀಯ ನಿವಾಸಿಗಳು ಮಾನವೀಯತೆಯನ್ನೂ ಮರೆತು ವರ್ತಿಸಿದರು.
ಪಾಪ, ಆ ಪುಟ್ಟ ಮಗುವಿಗೆ ಇವರೆಲ್ಲ ಏಕೆ? ಹೀಗಾಡ್ತಿದ್ದಾರೆ ಎಂಬುದರ ಅರಿವೂ ಇರಲಿಲ್ಲ. ನಿದ್ರೆ ಮಂಪರಿನಲ್ಲಿದ್ದ ಮಗುವನ್ನು ತಂದೆ ಜತೆಯಲ್ಲಿ ನಿನ್ನೆ (ಗುರುವಾರ) ತಡರಾತ್ರಿಯೇ ರಾಮನಗರದ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕರೊನಾ ಸೋಂಕಿತರು ಗುಣಮುಖರಾದ ಮೇಲೂ ಕುಟುಂಬಸ್ಥರು ಅವರನ್ನು ಮನೆಗೆ ಸೇರಿಸದ ಪ್ರಕರಣಗಳ ಬಗ್ಗೆ ಈಗಾಗಲೇ ಕೇಳಿದ್ದೇವೆ. ಈಗ ಸೋಂಕೇ ಇಲ್ಲದ ಕೂಸನ್ನೂ ಸಮಸ್ಯೆಗೆ ದೂಡಿದ್ದು ಇದೇ ಮೊದಲು ಅನ್ನಿಸುತ್ತೆ.
ಇದನ್ನೂ ಓದಿರಿ ಗರ್ಭಿಣಿಗೆ ಕರೊನಾ ಇಲ್ಲದಿದ್ದರೂ ಇದೆ ಅಂದ್ರು… 6 ದಿನದ ಹಸುಗೂಸನ್ನೇ ಬಲಿ ಪಡೆದ್ರು!
ಗರ್ಭಿಣಿಗೆ ಕರೊನಾ ಇಲ್ಲದಿದ್ದರೂ ಇದೆ ಅಂದ್ರು… 6 ದಿನದ ಹಸುಗೂಸನ್ನೇ ಬಲಿ ಪಡೆದ್ರು!