ನವದೆಹಲಿ: ಹೆಚ್ಚು ಸಾಂಕ್ರಾಮಿಕವಾದ ಕರೊನಾ ವೈರಸ್ನ ಹೊಸ ರೂಪಾಂತರಿ, ಒಮಿಕ್ರಾನ್, ಇಡೀ ಜಗತ್ತಿನಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ಈ ರೂಪಾಂತರಿ ಭಾರತದಲ್ಲಿ ಸೋಂಕಿನ ಮೂರನೇ ಅಲೆಗೆ ಕಾರಣವಾಗಲಿದೆಯೇ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ, ಒಮಿಕ್ರಾನ್ ಕರೊನಾ ಲಸಿಕೆಯ ಸುರಕ್ಷೆಯನ್ನೂ ಬೈಪಾಸ್ ಮಾಡುವ ಸಾಧ್ಯತೆ ಇದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯ ಹೇಳಿದ್ದಾರೆ. ಕೋವಿಡ್ ಮುಂಜಾಗ್ರತೆ ಕ್ರಮಗಳನ್ನು ಹೆಚ್ಚು ಎಚ್ಚರಿಕೆಯಿಂದ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
ಇಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡಾ.ಗುಲೇರಿಯ, “ಒಮಿಕ್ರಾನ್ನ ಸ್ಪೈಕ್ ಪ್ರೋಟೀನ್ನಲ್ಲಿ 30 ಮ್ಯುಟೇಷನ್(ರೂಪಾಂತರ)ಗಳಿವೆಯಾದ್ದರಿಂದ ಇಮ್ಯುನೋಎಸ್ಕೇಪ್ ಮೆಕಾನಿಸಂಗಳನ್ನು ಬೆಳೆಸಿಕೊಳ್ಳುವ ಶಕ್ತಿ ಹೊಂದಿದೆ. ಬಹುತೇಕ ಲಸಿಕೆಗಳು ಸ್ಪೈಕ್ ಪ್ರೋಟೀನ್ನ ವಿರುದ್ಧ ಆ್ಯಂಟಿಬಾಡೀಸ್ ರೂಪಿಸಿ ಕೆಲಸ ಮಾಡುವುದರಿಂದ, ಒಮಿಕ್ರಾನ್ನಲ್ಲಿರುವ ಈ ಬದಲಾವಣೆಗಳು ಕರೊನಾ ಲಸಿಕೆಗಳ ಪರಿಣಾಮಕಾರಿತ್ವವನ್ನು ಕುಗ್ಗಿಸಬಹುದಾಗಿದೆ” ಎಂದಿದ್ದಾರೆ. ಒಮಿಕ್ರಾನ್ನ ಹರಡುವಿಕೆ ಮತ್ತು ತೀವ್ರತೆಯ ಬಗೆಗಿನ ಹೆಚ್ಚಿನ ಮಾಹಿತಿಗಳ ಆಧಾರದ ಮೇಲೆ ಲಸಿಕೆಗಳ ಪರಿಣಾಮಕಾರಿತ್ವ ಹೇಗಿರಲಿದೆ ಎಂದು ಕಠಿಣ ಪರಾಮರ್ಶೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರೊನಾಕ್ಕೆ ಬಲಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್
ಈ ಹೊಸ ರೂಪಾಂತರಿ ಬಿ.1.1.529ನ ಬಗ್ಗೆ ಭಾರತೀಯ ಸಾರ್ಸ್-ಕೋವಿ-2 ಜಿನೋಮಿಕ್ ಕನ್ಸಾರ್ಟಿಯ ಎಚ್ಚರ ವಹಿಸಿದ್ದು, ದೇಶದಲ್ಲಿ ಆ ರೂಪಾಂತರಿ ಇನ್ನೂ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರಿವೀಕ್ಷಣೆಗೆ ಒಡ್ಡುವುದು ಮತ್ತು ಯಾವುದಾದರೂ ಪ್ರದೇಶದಲ್ಲಿ ದಿಢೀರನೇ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದೆಡೆ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ಡಾ.ಗುಲೇರಿಯ ಹೇಳಿದ್ದಾರೆ.
“ಈ ಸಮಯದಲ್ಲಿ ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಹೆಚ್ಚು ಶ್ರದ್ಧೆಯಿಂದ ಪಾಲಿಸಬೇಕು. ಮೈಮರೆಯಬಾರದು. ಕರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯಲು ಶೀಘ್ರವಾಗಿ ಮುಂದಾಗಬೇಕು” ಎಂದು ಡಾ.ಗುಲೇರಿಯ ದೇಶದ ನಾಗರೀಕರಿಗೆ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)
ಆರು ದಿನಗಳಲ್ಲಿ ಮೂರನೇ ಜೀವ ಬೆದರಿಕೆ! ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ ಎಂದ ಇ-ಮೇಲ್!
ವರ್ಷದಲ್ಲಿ 39 ಬಾರಿ ಆ್ಯಂಬುಲೆನ್ಸ್ ಕರೆಸಿಕೊಂಡ! ಕಾರಣ ತಿಳಿದು ದಂಗಾದರು