ಬಾಗಲಕೋಟೆ: ಕಾಂಗ್ರೆಸ್ ಚುನಾವಣಾಪೂರ್ವದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳು ಪಕ್ಷ ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೆ ಏರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಂತೂ ನಿಜ. ಆ ಪೈಕಿ ಎರಡು ಗ್ಯಾರಂಟಿಗಳಂತೂ ಮಹಿಳೆಯರಿಗೆ ಸಂಬಂಧಪಟ್ಟಿದ್ದಾಗಿದ್ದು, ಭಾರಿ ಜನಪ್ರಿಯತೆ ಕೂಡ ಪಡೆದಿವೆ.
ಆದರೆ ಭಾಗ್ಯಗಳಿಗೆ ಹೆಸರಾದ ಸಿದ್ದರಾಮಯ್ಯ ಅವರ ಹೊಸದೊಂದು ಭಾಗ್ಯಕ್ಕೆ ಮಾತ್ರ ಮಾನಿನಿಯರು ಒಲಿಯಲಿಲ್ಲ. ಮಾತ್ರವಲ್ಲ, ಅದರ ವಿರುದ್ಧ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು, ಇದೀಗ ಅವರ ಒತ್ತಾಯಕ್ಕೆ ಸಿಎಂ ಮಣಿದಿದ್ದಾರೆ.
ಪಂಚಾಯಿತಿ ಮಟ್ಟದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯುವ ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಸೆಟೆದು ನಿಂತಿದ್ದು, ಅಹೋರಾತ್ರಿ ಪ್ರತಿಭಟನೆಯನ್ನೂ ಮಾಡಿದ್ದರು. ಬಾಗಲಕೋಟೆಯಲ್ಲಿ ಮಹಿಳೆಯರು ಹಗಲಿರುಳೂ ನಡೆಸಿದ್ದ ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ, ಇದೀಗ ಹೊಸ ಮದ್ಯದಂಗಡಿಗೆ ಪರವಾನಗಿ ಕೊಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಇದರಿಂದ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.
ಅದೇ ಮಹಿಳೆಯರು ಇನ್ನೊಂದು ಬೇಡಿಕೆಯನ್ನೂ ಸಿಎಂ ಮುಂದಿಟ್ಟಿದ್ದಾರೆ. ಮದ್ಯದಂಗಡಿ ತೆರೆಯಲ್ಲ ಎಂದ ಸರ್ಕಾರದ ನಿರ್ಧಾರಕ್ಕೆ ಬಾಗಲಕೋಟೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮದ್ಯದ ಚಟದಿಂದ ಕುಟುಂಬ ತೊಂದರೆ ಅನುಭವಿಸುತ್ತಿರುವುದನ್ನು ಕೂಡ ಹೇಳಿಕೊಂಡಿದ್ದಾರೆ. ಮದ್ಯದಂಗಡಿ ತೆರೆದರೆ ಹಳ್ಳಿಗಳ ಮಹಿಳೆಯರು ಸಂಕಷ್ಟ ಎದುರಿಸಬೇಕಾಗುತ್ತದೆ, ಗೃಹಲಕ್ಷ್ಮೀ ಯೋಜನೆಯಡಿ ಸಿಗುವ 2 ಸಾವಿರ ರೂ. ಕೂಡ ಗಂಡ ಮದ್ಯಸೇವೆನೆಗೆ ತೆಗೆದುಕೊಂಡು ಹೋಗುತ್ತಿರುವುದು ನಡೆಯುತ್ತಿದೆ. ನೀವು ಕೊಟ್ಟ ಹಣ ಸದ್ಬಳಕೆ ಆಗಲು ಮದ್ಯ ನಿಷೇಧ ಮಾಡಿದರೆ ಪುಣ್ಯ ಬರುತ್ತದೆ ಎಂದ ಮಹಿಳೆಯರು, ಹೊಸ ಮದ್ಯದಂಗಡಿ ತೆರೆಯದಿರುವುದು ಮಾತ್ರವಲ್ಲ, ಹಳೆಯ ಮದ್ಯದಂಗಡಿಗಳೂ ಬಂದ್ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಪಂಚಾಯಿತಿಗೊಂದು ಹೊಸ ಮದ್ಯದಂಗಡಿ ತೆರೆಯಲು ಪರವಾನಗಿ ಕೊಡುವ ಸರ್ಕಾರದ ನಿಲುವನ್ನು ವಿರೋಧಿಸಿ, ಬಾಗಲಕೋಟೆ ಮಹಿಳೆಯರು ಅ.1 ಮತ್ತು 2ರಂದು ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು 24 ಗಂಟೆಗಳ ಅಹೋರಾತ್ರಿ ಧರಣಿ ನಡೆಸಿದ್ದರು.
ಕಾಂಗ್ರೆಸ್ ಚುನಾವಣಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಯಂತೆ ಅಧಿಕಾರಕ್ಕೆ ಬಂದ ಮೇಲೆ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸುವ ಶಕ್ತಿ, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಮಹಿಳೆಯರ ಮನ ಗೆದ್ದಿತ್ತು. ಇವೆರಡು ಯೋಜನೆಗಳು ರಾಜ್ಯದಲ್ಲಿ ಸಂಚಲನವನ್ನೂ ಸೃಷ್ಟಿಸಿದ್ದವು. ಆದರೆ ಅದೇ ಜೋಶ್ನಲ್ಲಿ ಹೊಸ ಮದ್ಯದಂಗಡಿ ತೆರೆಯಲು ಮುಂದಾಗಿರುವ ಸಿಎಂ ನಿರ್ಧಾರಕ್ಕೆ ಮಾತ್ರ ಮಾನಿನಿಯರು ಒಲವು ತೋರಿಲ್ಲ.
ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ.#LiquorShop pic.twitter.com/9anaekOzFn
— Siddaramaiah (@siddaramaiah) October 6, 2023
ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!
ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ ‘ರಾಮಾ ರಾಮಾ ರೇ’ ಸತ್ಯಪ್ರಕಾಶ್; ಅವರಿನ್ನು ನಟ-ನಿರ್ಮಾಪಕ-ವಿತರಕ-ನಿರ್ದೇಶಕ