ಬಾಗಲಕೋಟೆ: ಸಂವಿಧಾನ ಬದಲಾವಣೆ ಮಾಡಲು ಅದು ಪಠ್ಯ ಪುಸ್ತಕವಲ್ಲ. ಎನ್ಇಪಿ ಇದ್ದದ್ದನ್ನು ಎಸ್ಇಪಿ ಮಾಡಿದಂತೆ ಅಲ್ಲ. ಸಂವಿಧಾನ ಬದಲಾವಣೆ ಮಾಡುವ ಅಜೆಂಡ ಬಿಜೆಪಿಯದಲ್ಲ. ಡಾ. ಬಿ.ಆರ್. ಅಂಬೇಡ್ಕರ ಮರಳಿ ಬಂದರು ಅದನ್ನು ಬದಲಿಸಲು ಸಾಧ್ಯವಿಲ್ಲ. ಅದೊಂದು ಆಡಳಿತದ ಧರ್ಮ ಗ್ರಂಥವಾಗಿದೆ ಎಂದು ಮಾಜಿ ಶಾಸಕ, ಬಿಜೆಪಿ ನಾಯಕ ಎನ್. ಮಹೇಶ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಇರುವವರಿಗೆ ಬದಲಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸಾಕ್ಷಾತ್ ಹೇಳಿದ್ದರೂ ಕಾಂಗ್ರೆಸ್ ಪಕ್ಷದವರು ಹಿಂದುಳಿದ, ದಲಿತ ಸಮುದಾಯವರ ಮತ ಪಡೆಯಲು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ದೂರಿದರು.
ಸಂವಿಧಾನ ಕೇವಲ ಶೋಷಿತರಿಗೆ ಮಾತ್ರ ಅನ್ವಯವಾಗುವುದಿಲ್ಲ. ಎಲ್ಲ ಸಮುದಾಯದವರಿಗೆ ಸಂವಿಧಾನ ಇದೆ. ಬಿಜೆಪಿ ಅಧಿಕಾರಕ್ಕೆ ತಂದರ ಮೀಸಲಾತಿಯನ್ನು ಕಿತ್ತು ಹಾಕುತ್ತಾರೆ ಎಂದು ಕಾಂಗ್ರೆಸ್ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಮೀಸಲಾತಿಯನ್ನು ಎಂದೂ ಕೂಡ ಬಿಜೆಪಿ ವಿರೋಧಿಸಿಲ್ಲ. ಕೇಂದ್ರ ಗೃಹ ಸಚಿವ ಅಮಿತ ಶಾ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳಿಲ್ಲ. ಅವರು ಮಾತನಾಡಿದ ವಿಡಿಯೋವನ್ನು ತಿರುಚಲಾಗಿದೆ. ಜಾತಿ ವ್ಯವಸ್ಥೆ, ಅಸಮಾನತೆ ಎಲ್ಲಿಯವರೆಗೆ ಇರುತ್ತದೆ. ಅಲ್ಲಿಯವರೆಗೆ ಮೀಸಲಾತಿ ವ್ಯವಸ್ಥೆ ಜೀವಂತವಾಗಿರಲಿದೆ ಎಂದು ಆರ್ಎಸ್ಎಸ್ನ ಮೋಹನ್ ಭಾಗವತಜೀ ಹೇಳಿದ್ದಾರೆ. ಹೀಗಾಗಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು.
ವಿ.ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನವಾಸ ಪೂಜಾರಿ, ಮುಖಂಡರಾದ ವೀರಣ್ಣ ಹೇಳಗೌಡರ, ರಾಘವೇಂದ್ರ ನಾಗೂರ, ಶಿವಾನಂದ ಸುರಪುರ ಇತರರು ಇದ್ದರು.