ಬಕ್ಸಾರ್: ಗ್ರಾಹಕನಿಗೆ ಸಾಂಬಾರ್ ನೀಡದಿದ್ದಕ್ಕೆ ರೆಸ್ಟೊರೆಂಟ್ವೊಂದು 3,500 ರೂ.ಗಳನ್ನು ದಂಡವಾಗಿ ಪಾವತಿಸಬೇಕಾಗಿರುವ ವಿಚಿತ್ರ ಘಟನೆ ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ನಡೆದಿದೆ.
ವಕೀಲ ಮನೀಶ್ ಗುಪ್ತಾ ಎಂಬುವರು ತಮ್ಮ ಹುಟ್ಟುಹಬ್ಬದ ದಿನದಂದು ಮಸಾಲಾ ದೋಸೆಯನ್ನು ಸವಿಯಲು ನಿರ್ಧರಿಸಿ ಬಕ್ಸಾರ್ನ ನಮಕ್ ರೆಸ್ಟೋರೆಂಟ್ ಹೋಗಿದ್ದಾರೆ. ಅಲ್ಲಿ ತನ್ನ ತಾಯಿಗಾಗಿ 140 ರೂಪಾಯಿ ಮೌಲ್ಯದ ವಿಶೇಷ ಮಸಾಲೆ ದೋಸೆಯನ್ನು ಮನೆಗೆ ತಂದಿದ್ದಾರೆ. ಈ ವೇಳೆ ಪಾರ್ಸೆಲ್ ತೆರೆದು ನೋಡಿದಾಗ ದೋಸೆ ಜೊತೆಗೆ ಇರಬೇಕಾಗಿದ್ದ ಸಾಂಬಾರ್ ಕಾಣೆಯಾಗಿತ್ತು. ಜನ್ಮ ದಿನದಂದೇ ವಿಶೇಷವಾಗಿ ತಂದಿದ್ದ ಪಾರ್ಸೆಲ್ ಹೀಗೆ ಆಗಿದ್ದರಿಂದ ಮನೀಶ್, ಈ ಬಗ್ಗೆ ಕೇಳಲು ರೆಸ್ಟೋರೆಂಟ್ ಹೋಗಿದ್ದಾರೆ. ಆಗ ರೆಸ್ಟೋರೆಂಟ್ನವರು ಆತನಿಗೆ ಮನಬಂದಂತೆ ಮಾತನಾಡಿ ಆತನಿಗೆ ಅಲ್ಲಿಂದ ಕಳುಹಿಸಿದ್ದಾರೆ.
ಇದನ್ನೂ ಓದಿ: ಮುಂಡದಿಂದ ಆಂತರಿಕವಾಗಿ ಬೇರ್ಪಟ್ಟ ಶಿರವನ್ನು ಯಶಸ್ವಿಯಾಗಿ ಜೋಡಿಸಿದ ವೈದ್ಯರು…!
ಮನೆಗೆ ಬಂದ ಮನೀಶ್, ರೆಸ್ಟೋರೆಂಟ್ಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ, ದೋಸೆ ತಿನ್ನುವಾಗ ಸಾಂಬಾರ್ ಪ್ರಮುಖ ಆಹಾರ ಪದಾರ್ಥವಾಗಿವೆ ಎಂದು ಯೋಚಿಸಿ ಇದು ಗ್ರಾಹಕರ ನಂಬಿಕೆಯನ್ನು ವಂಚಿಸಿದ ಮತ್ತು ಉಲ್ಲಂಘಿಸಿದ ಪ್ರಕರಣ ಎಂದು ಗ್ರಾಹಕ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕುರಿತು 11 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ಆಯೋಗವು, ಮನೀಶ್ ಹೇಳಿಕೆ ನಿಜವೆಂದು ಪರಿಗಣಿಸಿ ರೆಸ್ಟೋರೆಂಟ್ಗೆ 3500 ರೂ.ಗಳ ದಂಡ ವಿಧಿಸಿದೆ. ದಂಡ ಪಾವತಿಸಲು ರೆಸ್ಟೋರೆಂಟ್ಗೆ 45 ದಿನಗಳ ಕಾಲಾವಕಾಶ ನೀಡಿದ್ದು, ಸಮಯಕ್ಕೆ ಸರಿಯಾಗಿ ದಂಡವನ್ನು ನೀಡಲು ವಿಫಲವಾದರೆ ದಂಡದ ಮೊತ್ತಕ್ಕೆ ಶೇ 8ರಷ್ಟು ಬಡ್ಡಿ ಸೇರಿ ದಂಡ ಪಾವತಿಸಬೇಕು ಎಂದು ಹೇಳಿದೆ.(ಏಜೆನ್ಸೀಸ್)