ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಗೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ತಮ್ಮ ರಾಜ್ಯದಲ್ಲಿ ಕಾಯ್ದೆ ಜಾರಿ ಮಾಡುವುದಿಲ್ಲ ಎಂದಿದ್ದಾರೆ.
ಅದರಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯವನ್ನೂ ಅಂಗೀಕರಿಸಲಾಗಿದೆ.
ಹೀಗಿರುವಾಗ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನದ ಬಗ್ಗೆ ಖಡಕ್ ಸೂಚನೆ ನೀಡಿದ್ದಾರೆ.
ಪ್ರತಿ ರಾಜ್ಯದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವಾಗಲೇಬೇಕು. ಯಾರೊಬ್ಬರೂ ಇದನ್ನು ತಪ್ಪಿಸುವಂತಿಲ್ಲ. ಹಾಗೆ ಮಾಡಿದರೆ ಅದು ಸಂವಿಧಾನ ವಿರೋಧಿ ಆಗಿರುತ್ತದೆ ಎಂದಿದ್ದಾರೆ.
ನಾವು ಗಮನಿಸುತ್ತಿದ್ದೇವೆ. ಹಲವು ರಾಜ್ಯ ಸರ್ಕಾರಗಳು ಕಾಯ್ದೆ ಅನುಷ್ಠಾನ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಯ್ದೆ ಜಾರಿಗೊಳಿಸಲು ಹಿಂದೆ ಸರಿಯುತ್ತಿದ್ದಾರೆ. ಇಂತಹ ಸರ್ಕಾರಗಳಿಗೆ ಮತ್ತೊಮ್ಮೆ ನೆನಪಿಸುತ್ತೇನೆ. ಕಾಯ್ದೆ ಬಗ್ಗೆ ಸೂಕ್ತ ಕಾನೂನು ಸಲಹೆ ಪಡೆದುಕೊಳ್ಳಿ. ರಾಷ್ಟ್ರೀಯತೆ ಪ್ರದಾನ ಮಾಡುವ ಹಾಗೂ ಪೌರತ್ವಕ್ಕೆ ಸಂಬಂಧಪಟ್ಟ ಕಾಯ್ದೆಯನ್ನು ಜಾರಿ ಮಾಡಲು ಸಂಸತ್ತಿಗೆ ಸಂಪೂರ್ಣ ಅಧಿಕಾರವಿದೆ ಎಂಬುದನ್ನು ಆರ್ಟಿಕಲ್ 245 ಮತ್ತು 256 ಸ್ಪಷ್ಟವಾಗಿ ಹೇಳುತ್ತವೆ ಎಂದು ಕಾನೂನು ಸಚಿವರು ಹೇಳಿದ್ದಾರೆ.
ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಸಂಪೂರ್ಣವಾಗಿ ಚರ್ಚೆ ಮಾಡಿಯೇ ಸಿಎಎ ಕಾಯ್ದೆ ಮಾಡಿದ್ದು. ಈಗ ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರಗಳು ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.