ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಕರೊನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿ ಇರುವಂತೆ ಕಾಣಿಸುತ್ತಿದೆ. ಈ ವಿಷಯವನ್ನು ಕೇಂದ್ರ ಸರ್ಕಾರ ಕೂಡ ಖಚಿತಪಡಿಸಿದ್ದು, ಇದುವರೆಗೂ ಕರೊನಾ ಸೋಂಕು ಸಮುದಾಯಿಕ ಹರಡುವಿಕೆ ಹಂತ ತಲುಪಿಲ್ಲ ಎಂದು ಹರ್ಷ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ 3.0 ಸಂದರ್ಭದಲ್ಲಿ ದೇಶಾದ್ಯಂತ ಹಲವು ವಿನಾಯ್ತಿಗಳನ್ನು ಘೋಷಿಸಲಾಗಿದೆ.
ಆದರೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ವೈದ್ಯರ ಮಾತನ್ನು ನಂಬುವುದಾದರೆ, ಕರೊನಾ ಸೋಂಕು ಸದ್ಯ ನಿಯಂತ್ರಣದಲ್ಲಿ ಇರುವಂತೆ ಕಾಣುತ್ತಿದೆ. ಆದರೂ, ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ಮುಂದಿನ ನಾಲ್ಕು ಅಥವಾ ಆರು ವಾರ (ಒಂದೂವರೆ ತಿಂಗಳು) ಭಾರತದ ಪಾಲಿಗೆ ತುಂಬಾ ಮಹತ್ವವಾಗಿದೆ.
ಇದನ್ನೂ ಓದಿ: ಮದುವೆಗೋ, ಮಸಣಕೋ? ಎಲ್ಲಿ, ಎಷ್ಟು ಜನ ಸೇರಬಹುದು? ಕೇಂದ್ರದ ಪರಿಷ್ಕೃತ ಆದೇಶ ಪ್ರಕಟ
ಈ ಎಚ್ಚರಿಕೆಯನ್ನು ನೀಡಿರುವ ಏಮ್ಸ್ನ ವೈದ್ಯ ಡಾ. ರಣದೀಪ್ ಗುಲೇರಿಯಾ, ಕರೊನಾ ಸೋಂಕಿನ ಏರಿಳಿತದ ಗತಿ ಚಿಂತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರದಲ್ಲಿ ಕರೊನಾ ಸೋಂಕಿನ ಹರಡುವಿಕೆ ಕುರಿತು ನಿಗಾವಹಿಸಿರುವ ಕೇಂದ್ರ ಸರ್ಕಾರದ ಕೋರ್ ಟೀಂನ ಭಾಗವಾಗಿರುವ ಡಾ. ಗುಲೇರಿಯಾ ಸ್ವತಃ ಶ್ವಾಸಕೋಶ ತಜ್ಞರಾಗಿದ್ದಾರೆ. ಲಾಕ್ಡೌನ್ನಿಂದಾಗಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂಬುದು ನಿಜ. ಆದರೆ, ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗೆಂದು ಲಾಕ್ಡೌನ್ ಅನ್ನು ಮುಂದುವರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳು ಅಥವಾ ಒಂದೂವರೆ ತಿಂಗಳು ಭಾರತದ ಪಾಲಿಗೆ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲ್ಯಾಬ್ನಲ್ಲಿ ಕರೊನಾವನ್ನು ಮಣಿಸಿದ ಆ್ಯಂಟಿಬಾಡಿ, ಹಾಲೆಂಡ್ನಲ್ಲಿ ಪ್ರಯೋಗ
ರಾಷ್ಟ್ರದಲ್ಲಿ ಸೋಂಕಿತ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಹಾಗೆಂದು ಅದು ನಿಯಂತ್ರಣವನ್ನು ಮೀರಿ ಹೆಚ್ಚಾಗುತ್ತಿಲ್ಲ ಎಂಬುದು ಒಂದೇ ಸಮಾಧಾನದ ಸಂಗತಿ ಎಂದು ತಿಳಿಸಿದ್ದಾರೆ.
ಸಿದ್ಧತೆಗೆ ಅನುಕೂಲವಾಯಿತು: ಲಾಕ್ಡೌನ್ನಿಂದ ಸೋಂಕು ಹರಡುವಿಕೆ ನಿಯಂತ್ರಿಸಲು ಸಾಧ್ಯವಾಯಿತು. ಜತೆಗೆ, ಸೋಂಕಿತರಿಗೆ ಚಿಕಿತ್ಸೆ ಕೊಡಲು ಅಗತ್ಯವಾದ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿತು ಎಂದು ಡಾ. ಗುಲೇರಿಯಾ ಹೇಳಿದ್ದಾರೆ.
ಮೇ 5ರ ಸಂಜೆಯ ವರದಿ ಪ್ರಕಾರ ಭಾರತದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ 46,711ಕ್ಕೆ ಹೆಚ್ಚಳವಾಗಿದೆ. ಚಿಕಿತ್ಸೆ ಪಡೆಯುತ್ತಿರುವ 31,967 ಮಂದಿ ಇದರಲ್ಲಿ ಸೇರಿದ್ದಾರೆ. 1,583 ಮಂದಿ ಮೃತಪಟ್ಟಿದ್ದಾರೆ.