ಗುರುಗ್ರಾಮ: ಆಕೆ ಪಾಲಕರು ನೋಡಿ, ಗುರುತು ಮಾಡಿದ್ದ ಯುವಕನ ಜತೆ ಜೂ.29ರಂದು ಸಪ್ತಪದಿ ತುಳಿದಿದ್ದಳು. ಮದುವೆ ಸಂದರ್ಭದಲ್ಲಿ ಹಾಕಿದ್ದ ಮೆಹಂದಿಯ ರಂಗು ಆಕೆಯ ಕೈಗಳಲ್ಲಿ ಇನ್ನೂ ಗಾಢವಾಗಿಯೇ ಇತ್ತು. ಪಾಲಕರು, ಸಹೋದರ-ಸಹೋದರಿಯರನ್ನು ನೋಡಲೆಂದು ಶನಿವಾರವಷ್ಟೇ ತವರಿಗೆ ಬಂದಿದ್ದಳು. ಆದರೆ ಆಕೆ ಈಗ ಹೆಣವಾಗಿದ್ದಾಳೆ.
ಗುರುಗ್ರಾಮದ ಪಟೌಡಿ ಬಳಿಯ ನಾನ್ಕುವಾನ್ ಗ್ರಾಮದ ನಿವಾಸಿ ಪ್ರಿಯಾಂಕಾ (20) ತನ್ನ ಹುಚ್ಚು ಪ್ರೇಮಿಯಿಂದ ಹತ್ಯೆಯಾದವಳು. ಈಕೆಯನ್ನು ಹತ್ಯೆ ಮಾಡಿದ ಬಳಿಕ ಢಾಬಾದ ಮಾಲೀಕನಾಗಿದ್ದ ಈಕೆಯ ಪ್ರೇಮಿ ರಾಜೇಶ್ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಿಯಾಂಕಾ ಮತ್ತು ರಾಜೇಶ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಿ ಮೂರು ಮಕ್ಕಳಿದ್ದರೂ ರಾಜೇಶ್ ಈಕೆಯನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ರಾಜಸ್ಥಾನ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಸ್, ಕಾದು ನೋಡುತ್ತಿರುವ ಬಿಜೆಪಿ
ಆದರೆ ಪಾಲಕರ ಒತ್ತಾಯದ ಮೇರೆಗೆ ಪ್ರಿಯಾಂಕಾ ಬೇರೊಬ್ಬ ಯುವಕನೊಂದಿಗೆ ಜೂ.29ರಂದು ಸಪ್ತಪದಿ ತುಳಿದಿದ್ದಳು. ಗಂಡನ ಮನೆಯಲ್ಲಿ ಕೆಲದಿನ ಇದ್ದ ಆಕೆ, ಜು.11ರಂದು ತವರಿಗೆ ಮರಳಿದ್ದಳು.
ವಿಷಯ ತಿಳಿದು ಆಕೆಯ ಮನೆಗೆ ಹೋದ ರಾಜೇಶ್ ಉಪಾಯವಾಗಿ ಆಕೆಯನ್ನು ತನ್ನ ಢಾಬಾಕ್ಕೆ ಕರೆತಂದಿದ್ದ. ಅಲ್ಲಿ ಸಾಕಷ್ಟು ವಾಗ್ವಾದಗಳು ಆದನಂತರ ಪ್ರೇಮಿಕೆಯ ಹೃದಯಕ್ಕೆ ಗುಂಡು ಹೊಡೆದು ಆಕೆಯನ್ನು ಸಾಯಿಸಿದ್ದ. ಬಳಿಕ ತನ್ನ ತಲೆಗೆ ಗುಂಡು ಹೊಡೆದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯಿಂದ ಹೋಗಿ ಎಷ್ಟು ಹೊತ್ತಾದರೂ ಪ್ರಿಯಾಂಕಾ ಮನೆಗೆ ಮರಳದ್ದರಿಂದ ಆಕೆಯ ಚಿಕ್ಕಪ್ಪ ರಾಮ್ಜಿ ಲಾಲ್ ಸೇರಿ ಕುಟುಂಬದವರೆಲ್ಲ ಆಕೆಗಾಗಿ ಹುಡುಕಾಡಲಾರಂಭಿಸಿದ್ದರು. ಅನುಮಾನದ ಮೇರೆಗೆ ರಾಜೇಶ್ನ ಢಾಬಾಕ್ಕೆ ತೆರಳಿದಾಗ ಪ್ರಿಯಾಂಕಾಳನ್ನೂ ಸಾಯಿಸಿ, ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದಾಗಿ ಹೇಳಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.