ಬೆಂಗಳೂರು: ಐದು ದಿನಗಳ ಹಿಂದೆ ನಗರದ ಪಿಜಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹೌಸ್ ಕೀಪಿಂಗ್ ಯುವಕ ಕೊಲೆಯಾಗಿ ಅಂತ್ಯ ಕಂಡಿದ್ದಾನೆ.
ಬಾಬು ಸಾಬ್ ಪಾಳ್ಯದ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಹೌಸ್ ಕೀಪಿಂಗ್ ಹುಡುಗರ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳು ಮೃತದೇಹವನ್ನು ಮೋರಿಯಲ್ಲಿ ಎಸೆದು ಹೋಗಿದ್ದಾರೆ. ಚರಂಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಮೃತದೇಹ ಪತ್ತೆಯಾಗಿದೆ. ಇಲ್ಲದಿದ್ದರೆ ಪತ್ತೆ ಆಗುತ್ತಿರಲಿಲ್ಲವೇನೋ…
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒಟ್ಟು ಐವರನ್ನು ಬಂಧನಕ್ಕೆ ಒಳಪಡಿಸಲಾಗಿದೆ.
ಅಂದ ಹಾಗೆ ಕೊಲೆಯಾದ ಹುಡುಗನ ಹೆಸರು ಧನ್ ಸಿಂಗ್ ಧಾನ್ಯ. ಮೃತ ಧನ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳು ನೇಪಾಳ ಮೂಲದವರಾಗಿದ್ದಾರೆ.
ಬಾಬು ಸಾಬ್ ಪಾಳ್ಯದ ಎಸ್.ಎಸ್ ಪಿಜಿಯೊಂದರಲ್ಲಿ ಎಲ್ಲಾ ಆರೋಪಿಗಳು ಕೆಲಸ ಮಾಡುತ್ತಿದ್ದರು. ಮೃತ ಧನ್ ಸಿಂಗ್ ಸಹ ಅದೇ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ. ಧನ್ ಸಿಂಗ್ ಇತರೆ ಆರೋಪಿಗಳ ಜೊತೆ ಗಲಾಟೆ ಮಾಡುತ್ತಿದ್ದ. ಈ ಹಿಂದೆ ಸಾಕಷ್ಟು ಬಾರಿ ಕುಡಿದು ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಧನ್ ಸಿಂಗ್ನನ್ನು ಮುಗಿಸಲು ಉಳಿದವರು ಸ್ಕೆಚ್ ಹಾಕಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆಯೂ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಾಗಿದ್ದ ಆತನ ಸಹೋದ್ಯೋಗಿಗಳು ಪಕ್ಕಾ ಪ್ಲ್ಯಾನ್ ಮಾಡಿದ್ದರು. ಈ ಆರೋಪಿಗಳು ಸಿಗರೇಟ್ ನೀಡೋದಾಗಿ ಕರೆಸಿದ್ದಾರೆ. ಸಿಗರೇಟ್ ಆಸೆಗೆ ಬಲಿಯಾದ ಧನ್ ಸಿಂಗ್ ಇವರು ಹೇಳಿದ್ದ ಜಾಗಕ್ಕೆ ಬಂದಿದ್ದಾನೆ. ಆಗ ಬೆಲ್ಟ್ ನಿಂದ ಕತ್ತಿಗೆ ಸುತ್ತಿ ಮತ್ತು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಹೀಗೆ ಧನ್ ಸಿಂಗ್ ಕಥೆ ಮುಗಿಸಿದ್ದಾರೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈಗ ಪ್ರಕರಣ ದಾಖಲಾಗಿದೆ.