More

    ರಾಕ್‌ಲೈನ್ ವೆಂಕಟೇಶ್ ಸಹೋದರ ಮನೆ ದೋಚಿದ್ದ ನೇಪಾಳಿ ಗ್ಯಾಂಗ್ ಸೆರೆ

    ಬೆಂಗಳೂರು: ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರ, ಉದ್ಯಮಿ ಮನೆಗೆ ಕನ್ನ ಹಾಕಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಮೂವರು ಮಹಿಳೆಯರು ಸೇರಿ ನೇಪಾಳ ಗ್ಯಾಂಗ್ ಆನ್ನು ಮಹಾಲಕ್ಷ್ಮೀಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ನೇಪಾಳ ಮೂಲದ ಉಪೇಂದ್ರ ಬಹದ್ದೂರ್ ಶಾಹಿ ಅಲಿಯಾಸ್ ಭೂಪೇಂದ್ರ ಪ್ರದೀಪ್ ಶಾಹಿ, ನಾರ ಬಹದ್ದೂರ್ ಶಾಹಿ ಅಲಿಯಾಸ್ ನಬೀನ್, ಖಾಕೇಂದ್ರ ಬಹದ್ದೂರ್ ಅಲಿಯಾಸ್ ಶಾಹಿ ಖಕೇಂದರ್, ಕೋಮಲ್ ಶಾಹಿ, ಸ್ವಸ್ತಿಕ್ ಶಾಹಿ, ಪಾರ್ವತಿ ಶಾಹಿ, ಶಾದಲ ಶಾಹಿ ಬಂಧಿತರು. 1.5 ಕೋಟಿ ರೂ. ಮೌಲ್ಯದ 3.10 ಕೆಜಿ ಚಿನ್ನಾಭರಣ, 40 ಸಾವಿರ ರೂ. ಮೌಲ್ಯದ 562 ಗ್ರಾಂ ಬೆಳ್ಳಿ ಹಾಗೂ 2 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 16 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ.

    ನಾಗಪುರ ವಾರ್ಡ್‌ನ ಡಬ್ಲ್ಯುಒಸಿ ರಸ್ತೆ ನಿವಾಸಿ, ಉದ್ಯಮಿ ಟಿ.ಎನ್. ಭ್ರಮರೇಶ್ ಕುಟುಂಬ ಸಮೇತ ಗ್ರೀಸ್ ಪ್ರವಾಸಕ್ಕೆ ತೆರಳಿದ್ದಾಗ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ಎಚ್.ಮಂಜು ನೇತೃತ್ವದ ತಂಡ, ನೆರೆಹೊರೆಯವರನ್ನು ವಿಚಾರಿಸಿದಾಗ ಕೃತ್ಯದ ಬಳಿಕ ಪಕ್ಕದ ಕಟ್ಟಡದಲ್ಲಿದ್ದ ನೇಪಾಳದ ಐವರು ಸೆಕ್ಯೂರಿಟಿ ಗಾರ್ಡ್‌ಗಳು ನಾಪತ್ತೆ ಆಗಿರುವ ಸಂಗತಿ ಗೊತ್ತಾಗಿ ಬಂಧಿಸಿದೆ. ತಲೆಮರೆಸಿಕೊಂಡಿರುವ ಬಸಂತ್ ಶಾಹಿ, ಬಿಮ್ ಬಿರಶಾಹಿ, ಯಶೋಧ ಪತ್ತೆಗೆ ಬಲೆಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

    ಕೆಲ ವರ್ಷಗಳ ಹಿಂದೆ ನೌಕರಿ ಅರಸಿ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಬಂಧಿತ ಆರೋಪಿಗಳು, ನಗರದ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್‌ಗಳಾಗಿದ್ದರು. ಅಂತೆಯೇ ಮಹಾಲಕ್ಷ್ಮೀ ಲೇಔಟ್ ಸಮೀಪದ ನಾಗಪುರದ ಸತೀಶ್ ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ನಾರ ಬಹದ್ದೂರ್, ಖಾಕೇಂದ್ರ, ಸ್ವಸ್ತಿಕ್ ಮತ್ತು ಪಾರ್ವತಿ ಶಾಹಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು.

    ನೆರೆಹೊರೆಯವರ ಬಗ್ಗೆ ಮಾಹಿತಿ ಕಲೆ ಹಾಕಿದ ಆರೋಪಿಗಳು, ಸತೀಶ್ ಅವರ ಮನೆ ಪಕ್ಕದಲ್ಲಿ ನೆಲೆಸಿದ್ದ ಭ್ರಮರೇಶ್ ಶ್ರೀಮಂತಿಕೆ ತಿಳಿದು ಕನ್ನ ಹಾಕಲು ನಿರ್ಧರಿಸಿದ್ದರು. 4 ತಿಂಗಳಿಂದ ಹೊಂಚು ಹಾಕಿದ್ದ ಆರೋಪಿಗಳು, ಅ.21ರಂದು ಭ್ರಮರೇಶ್ ಕುಟುಂಬ ಪ್ರವಾಸಕ್ಕೆ ತೆರಳಿರುವ ಸಂಗತಿ ಕಲೆ ಹಾಕಿ ಸಂಚು ರೂಪಿಸಿದ್ದರು. 4 ಅಂತಸ್ತಿನ ಮನೆಗೆ ಏಣಿ ಹಾಕಿಕೊಂಡು ಮಹಡಿಗೆ ತೆರಳಿದ್ದ ಆರೋಪಿಗಳು, ಅಲ್ಲಿ ಕೋಣೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಲಾಕರ್‌ನಲ್ಲಿದ್ದ 5.5 ಕೆಜಿ ಚಿನ್ನಾಭರಣ, ವಿವಿಧ ಕಂಪನಿಯ ವಾಚ್‌ಗಳು, 6.10 ಲಕ್ಷ ರೂ. ನಗದು ದೋಚಿದ್ದರು. ವಿದೇಶ ಪ್ರವಾಸ ಮುಗಿಸಿ ಮರಳಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಈ ಕುರಿತು ಪೊಲೀಸರಿಗೆ ಭ್ರಮರೇಶ್ ದೂರು ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts