ನಾಸಿಕ್: ಈರುಳ್ಳಿ ಬೆಲೆ ಈಗ ಒಂದು ಕೆಜಿಗೆ 70-80 ರೂಪಾಯಿ. ಈ ಬೆಲೆಯು ಕೆಲ ತಿಂಗಳುಗಳ ಹಿಂದೆ 100 ರೂಪಾಯಿಯ ಗಡಿ ತಲುಪಿತ್ತು. ಹೀಗಾಗಿ, ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಹಾಗೂ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದೆ. ಕಳೆದ ಡಿಸೆಂಬರ್ 8ರಿಂದ ಇದು ಜಾರಿಗೆ ಬಂದಿದೆ. ಮುಂದಿನ ವರ್ಷ ಮಾರ್ಚ್ 31ರವರೆಗೆ ಈ ರಫ್ತು ನಿಷೇಧ ಜಾರಿಯಲ್ಲಿರುತ್ತದೆ. ಆದರೆ, ಎನ್ಸಿಪಿ ನಾಯಕ ಶರದ್ ಪವಾರ್ ಈ ನಿಷೇಧಕ್ಕೆ ಈಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಷೇಧ ರದ್ದು ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಬೇಡಿಕೆಗೆ ಮಣಿದರೆ ಈರುಳ್ಳಿ ಬೆಲೆ ಗಗನಮುಖಿಯಾಗುವುದು ಗ್ಯಾರಂಟಿ.
ಸೋಮವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಈರುಳ್ಳಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಈರುಳ್ಳಿ, ದ್ರಾಕ್ಷಿ ಬೆಳೆಗಾರರು ಈಗಾಗಲೇ ಸಮಸ್ಯೆ ಎದುರಿಸುತ್ತಿದ್ದಾರೆ. ಈರುಳ್ಳಿ ರಫ್ತು ನಿಷೇಧದಿಂದ ಅವರ ತೊಂದರೆ ಹೆಚ್ಚಾಗುತ್ತದೆ. ಎಥೆನಾಲ್ ಉತ್ಪಾದನೆಯನ್ನು (ಕಬ್ಬಿನ ರಸ ಮತ್ತು ಸಕ್ಕರೆ ಪಾಕದಿಂದ) ನಿಲ್ಲಿಸುವ ನಿರ್ಧಾರವು ಅಪಾಯಕಾರಿಯಾಗಿದೆ. ಸರ್ಕಾರವು ರೈತರಿಗೆ ಸಹಾಯ ಮಾಡಬೇಕು. ಕೇಂದ್ರ ಸರ್ಕಾರವು “ರೈತ ವಿರೋಧಿ” ನೀತಿಗಳನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು.
ಈರುಳ್ಳಿ ರಫ್ತು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಹಲವಾರು ರೈತರು ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ರಸ್ತಾ ರೋಕೋ’ (ರಸ್ತೆ ತಡೆ) ನಡೆಸಿದರು.
ನಾಸಿಕ್ನ ಚಂದವಾಡ್ ಗ್ರಾಮದಲ್ಲಿ ಈರುಳ್ಳಿ ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಕೇಂದ್ರ ಸರ್ಕಾರವು ರೈತರ ಶ್ರಮವನ್ನು ನಿರ್ಲಕ್ಷಿಸುತ್ತಿದೆ. ಸಾಗುವಳಿದಾರರು ಒಗ್ಗಟ್ಟಾಗಿ ಅವರ ಹಕ್ಕುಗಳಿಗೆ ಬೇಡಿಕೆಯಿಡುವ ಅಗತ್ಯವಿದೆ ಎಂದು ಹೇಳಿದರು.
ನವದೆಹಲಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ, ರೈತರಿಗೆ ನೆರವಾಗುವ ಜವಾಬ್ದಾರಿಯು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕಿದೆ ಎಂದು ಮಾಜಿ ಕೇಂದ್ರ ಸಚಿವರೂ ಆದ ಪವಾರ್ ಹೇಳಿದರು.
ಇಲ್ಲಿನ ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎನ್ಸಿಪಿ, ಕಾಂಗ್ರೆಸ್, ಶಿವಸೇನೆ (ಯುಬಿಟಿ), ಸಿಪಿಎಂ ಮತ್ತು ವಿವಿಧ ರೈತ ಸಂಘಟನೆಗಳ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಚಂದವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ (ಎಪಿಎಂಸಿ) ಮೆರವಣಿಗೆ ಕೈಗೊಂಡು ಹೆದ್ದಾರಿಗೆ ಆಗಮಿಸಿ ಅಲ್ಲಿ ‘ರಸ್ತಾ ರೋಕೋ’ (ರಸ್ತೆ ತಡೆ) ನಡೆಸಿದರು. ಧರಣಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಹರಾಜು ಮತ್ತೆ ಆರಂಭ:
ಈ ನಡುವೆ ಶನಿವಾರದಿಂದ ಜಿಲ್ಲೆಯ ಸಗಟು ಮಾರುಕಟ್ಟೆಗಳಲ್ಲಿ ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿದ್ದ ಈರುಳ್ಳಿ ಹರಾಜು ಸೋಮವಾರ ಬಹುತೇಕ ಕಡೆಗಳಲ್ಲಿ ಆರಂಭವಾಯಿತು. ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲಗಾಂವ್ ಎಪಿಎಂಸಿಗೆ 150 ವಾಹನಗಳಲ್ಲಿ ಈರುಳ್ಳಿ ಬಂದಿತ್ತು. ಪ್ರತಿ ಕ್ವಿಂಟಾಲ್ಗೆ ಕನಿಷ್ಠ 1,500 ರಿಂದ ಗರಿಷ್ಠ 2,600 ರೂ.ವರೆಗೆ; ಸರಾಸರಿ ಈರುಳ್ಳಿ ಬೆಲೆ 2,200 ರೂ. ಇದೆ. ಲಾಸಲಗಾಂವ್ ಎಪಿಎಂಸಿ ವ್ಯಾಪ್ತಿಯ ವಿಂಚೂರು ಮತ್ತು ನಿಫಾಡ್ ಉಪಸಮಿತಿಗಳಲ್ಲೂ ಸೋಮವಾರ ಈರುಳ್ಳಿ ಹರಾಜು ಆರಂಭವಾಯಿತು.
ರಾಜಸ್ಥಾನ ಸಿಎಂ ಆಯ್ಕೆ ಮಂಗಳವಾರ: ರೇಸ್ನಲ್ಲಿ ವಸುಂಧರಾ ರಾಜೇ, ಬಾಲಕನಾಥ್, ಶೇಖಾವತ್, ಮೇಘವಾಲ್, ವೈಷ್ಣವ್
ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಸಲಿಂಗಕಾಮ, ವ್ಯಭಿಚಾರ: ಸಮಿತಿಯ ಸಲಹೆಗಳಿಗೆ ಪ್ರಧಾನಿ, ಕೇಂದ್ರ ಕ್ಯಾಬಿನೆಟ್ ಅಸಮ್ಮತಿ