ಚೆನ್ನೈ: ಲೇಡಿ ಸೂಪರ್ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗುವ ಅಂಚಿನಲ್ಲಿದ್ದಾರೆ. ಬಾಲಿವುಡ್ಗೆ ಪದಾರ್ಪಣೆ ಮಾಡಿದ ಜವಾನ್ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆದ ಬೆನ್ನಲ್ಲೆ ತಮ್ಮ ಸಂಭಾವನೆಯನ್ನು ನಯನತಾರ ಏರಿಸಿಕೊಂಡಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ಮಣಿರತ್ಮಂ ಅವರ ಮುಂದಿನ ಸಿನಿಮಾ ಕೆಎಚ್ 234 ಗೆ ನಾಯಕಿಯಾಗಿ ನಯನತಾರಾ ಹೆಸರು ಫೈನಲ್ ಆಗಿದ್ದು, ಈ ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಅಂದಹಾಗೆ ಈ ಸಿನಿಮಾ ನಾಯಕನಾಗಿ ಕಮಲ್ ಹಾಸನ್ ನಟಿಸಲಿದ್ದಾರೆ.
ಕೆಎಚ್ 234 ಸಿನಿಮಾವನ್ನು ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಆರಂಭದಲ್ಲಿ ಸಮಂತಾ, ತ್ರಿಷಾ ಕೃಷ್ಣನ್ ಮತ್ತು ಸಾಯಿ ಪಲ್ಲವಿ ಹೆಸರುಗಳು ನಾಯಕಿಯ ಪಾತ್ರಕ್ಕೆ ಕೇಳಿಬಂದಿದ್ದವು. ಆದರೆ, ನಯನತಾರಾ ಹೆಸರು ಅಂತಿಮವಾಗಿದೆ. ಕಳೆದ ತಿಂಗಳು ಬಿಡುಗಡೆಯಾದ ಜವಾನ್ ಸಿನಿಮಾ 1146 ಕೋಟಿ ರೂ. ಗಳಿಕೆ ಮಾಡುವ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಇದರೊಂದಿಗೆ ನಯನತಾರಾ ಬೇಡಿಕೆ ಸಹ ಹೆಚ್ಚಾಗಿದೆ.
ಕೆಎಚ್ 234 ಸಿನಿಮಾದಲ್ಲಿ ತಮ್ಮ ಪಾತ್ರಕ್ಕಾಗಿ ನಯನತಾರಾ ಅವರು ಬರೋಬ್ಬರಿ 12 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಹೀಗೊಂದು ಸುದ್ದಿ ಕಾಲಿವುಡ್ ಗಲ್ಲಿಯಿಂದ ಕೇಳಿಬಂದಿದೆ. ಜವಾನ್ ಮತ್ತು ಇರೈವನ್ ಸಿನಿಮಾಗಳ ಯಶಸ್ಸಿನಿಂದ ಗೆಲುವಿನ ಲಯದಲ್ಲಿರುವ ನಯನಾಗೆ ಸಾಕಷ್ಟು ಬೇಡಿಕೆಗಳು ಬರುತ್ತಿದ್ದು, ಸಹಜವಾಗಿಯೇ ಸಂಭಾವನೆ ಏರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಎರಡೂ ಸಿನಿಮಾಗಳಿಗೆ ನಯನತಾರಾ ತಲಾ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ಹೇಳಲಾಗಿದೆ. 2016ರಲ್ಲಿ ತೆರೆಕಂಡ ಬಾಬು ಬಂಗಾರಂ ಸಿನಿಮಾಕ್ಕಾಗಿ ಪ್ರಸ್ತುತಕ್ಕಿಂತ 6 ಪಟ್ಟು ಕಡಿಮೆ ಸಂಭಾವನೆಯನ್ನು ನಯನಾ ಪಡೆದಿದ್ದರು.
ಅಂದಹಾಗೆ KH 234 ಅನ್ನು ರಾಜ್ ಕಮಲ್ ಫಿಲಂಸ್ ಇಂಟರ್ನ್ಯಾಶನಲ್, ಮದ್ರಾಸ್ ಟಾಕೀಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ಗಳ ಅಡಿಯಲ್ಲಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣವನ್ನು ರವಿ ಕೆ. ಚಂದ್ರನ್ ನಿರ್ವಹಿಸಲಿದ್ದಾರೆ. ಮಣಿರತ್ನಂ ಅವರ ಹಿಟ್ ಚಿತ್ರಗಳಾದ “ಕನ್ನತ್ತಿಲ್ ಮುತ್ತಮಿತ್ತಲ್” ಮತ್ತು “ಆಯುಧ ಎಳುತ್ತು” ನಲ್ಲಿ ರವಿ ಕೆ ಚಂದ್ರನ್ ಕೆಲಸ ಮಾಡಿದ್ದಾರೆ.
ಕೆಎಚ್ 234 ಚಿತ್ರಕ್ಕೆ ಅನ್ಬರಿವ್ ಮಾಸ್ಟರ್ಸ್ ಕೊರಿಯೋಗ್ರಾಫರ್ ಆಗಿ, ಶರ್ಮಿಷ್ಟಾ ರಾಯ್ ಪ್ರೊಡಕ್ಷನ್ ಡಿಸೈನರ್ ಆಗಿ ಮತ್ತು ಏಕಾ ಲಖಾನಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಲಿದ್ದಾರೆ. ಚಿತ್ರದ ಅಧಿಕೃತ ಶೀರ್ಷಿಕೆ ಶೀಘ್ರದಲ್ಲೇ ಬಹಿರಂಗಗೊಳ್ಳುವ ನಿರೀಕ್ಷೆಯಿದೆ. KH 234 ಗಾಗಿ ತಮ್ಮ ಹೆಚ್ಚು ಸಂಭಾವನೆಯೊಂದಿಗೆ, ನಯನತಾರಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಲು ಸಿದ್ಧರಾಗಿದ್ದಾರೆ, ಇದು ಚಿತ್ರರಂಗದಲ್ಲಿ ಅವರ ಅಪಾರ ಜನಪ್ರಿಯತೆ ಮತ್ತು ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ನಯನಾ ಸಂಭಾವನೆ ಕೆಲ ನಟರ ಕಣ್ಣು ಕೆಂಪಾಗಿಸಿದೆ. (ಏಜೆನ್ಸೀಸ್)
ಮಾನವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಲಾರ್ಡ್ ಹನುಮಂತ! ಎಲ್ಲರ ಹುಬ್ಬೇರಿಸಿದೆ ಇಲ್ಲೊಂದು ವಿಚಿತ್ರ ಕೇಸ್