ಜಮ್ಮು: ಕುಪ್ವಾರ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಮಾದಕ ಪದಾರ್ಥಗಳ ಮಾರಾಟ ಜಾಲವನ್ನು ಬೇಧಿಸಿರುವ ಸೇನೆ ಹಾಗೂ ಜಮ್ಮು-ಕಾಶ್ಮೀರದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಗ್ರ ಚಟುವಟಿಕೆಗಳ ಜತೆಗೆ ಇದೀಗ ಮಾದಕ ವಸ್ತುಗಳ ಮಾರಾಟವೂ ಜೋರಾಗಿಯೇ ನಡೆಯುತ್ತಿರುವುದನ್ನು ಮನಗಂಡಿರುವ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
ಇವರಿಂದ 50 ಕೋಟಿ ರೂಪಾಯಿಗಳ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ಜತೆಗೆ, 10 ಕೆ.ಜಿ ಬ್ರೌನ್ ಶುಗರ್, ಮದ್ದುಗುಂಡು ಮತ್ತು ಎರಡು ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಬಷೀರ್ ಅಹ್ಮದ್ ಶೇಖ್ ಮತ್ತು ಅಬ್ದುಲ್ ಅಮಿತ್ ಶೇಖ್ ಎಂದು ಇಬ್ಬರನ್ನು ಗುರುತಿಸಲಾಗಿದೆ. ಇವರು ತಂಗ್ಧರ್ ನಿವಾಸಿಗರು ಎಂದು ಕುಪ್ವಾರದ ಎಸ್ಎಸ್ಪಿ ಶ್ರೀರಾಮ್ ದಿನ್ಕರ್ ತಿಳಿಸಿದ್ದಾರೆ.
ಈ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ನಂತರ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು, ಸೇನೆಯ ಶ್ವಾನಗಳ ಮೂಲಕ ತಂಗ್ಧರ್ ಸಮೀಪದ ಸಧ್ನಾ ಪಾಸ್ ಬಳಿ ಕಾರ್ಯಾಚರಣೆ ನಡೆಸಿದ್ದು. ಅಲ್ಲಿ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳ ಬೃಹತ್ ಅಡಗುದಾಣವನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ರಾಮಮಂದಿರದ ಭವಿಷ್ಯದ ಸುರಕ್ಷತೆಗೆ ಹೀಗೊಂದು ಪ್ಲ್ಯಾನ್
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಶ್ರೀನಗರದ ಯಾವೊಬ್ಬ ನಿವಾಸಿಯೂ ಸದ್ಯ ಉಗ್ರ ಸಂಘಟನೆಗಳ ಕಮಾಂಡರ್ಗಳಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಶನಿವಾರ ಲಷ್ಕರ್-ಎ-ತಯಬಾದ ಕಮಾಂಡರ್ ಇಷ್ಫಾಕ್ ರಶೀದ್ ಖಾನ್ನನ್ನು ರಣಬೀರ್ಘರ್ ಪ್ರದೇಶದಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿದೆ.
ಉತ್ತರ ಕಾಶ್ಮೀರದ ಪ್ರದೇಶಗಳಿಂದ ದಕ್ಷಿಣ ಕಾಶ್ಮೀರಕ್ಕೆ ಹಲವು ಉಗ್ರರು ಕಾಶ್ಮೀರದ ಮೂಲಕವೇ ಸಂಚಿಸುತ್ತಿದ್ದಾರೆ. ಅತ್ಯಂತ ಗೌಪ್ಯವಾಗಿ, ಯಾರ ಗಮನಕ್ಕೂ ಬಾರದಂತೆ ಈ ಕಾರ್ಯಾಚರಣೆ ನಡೆಯುತ್ತಿದೆ. ಹಾಗಾಗಿ ಸದ್ಯಕ್ಕೆ ಶ್ರೀನಗರ ಭಯೋತ್ಪಾದನೆಯಿಂದ ಸಂಪೂರ್ಣ ಮುಕ್ತವಾಗಿದೆ ಎಂದು ಹೇಳಲಾಗದು. ಆದರೆ 2020ರಲ್ಲಿ ಇದುವರೆಗೂ 143 ಉಗ್ರರನ್ನು ಕಾರ್ಯಾಚರಣೆ ಮೂಲಕ ಹೊಡೆದುರುಳಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಹೇಳುತ್ತಾರೆ.