ಕಾರ್ಕಳ: ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ನಲ್ಲೂರು ಗಾಂಧಿನಗರದ ಬಸ್ ತಂಗುದಾಣ ಸಿಮೆಂಟ್ ಮಿಶ್ರಣ ಕೇಂದ್ರವಾಗಿ ಮಾರ್ಪಡಾಗಿದೆ.
ಕರ್ನಾಟಕ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಇದೇ ಪರಿಸರದ ರಸ್ತೆಯೊಂದರ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಸ್ಥಳೀಯ ಬಸ್ ತಂಗುದಾಣವನ್ನು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬರುತ್ತಿದೆ.
ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರಯಾಣಿಕರಿಗಾಗಿ ನಲ್ಲೂರು ಗ್ರಾಪಂ ಬಸ್ ತಂಗುದಾಣವನ್ನು ನಿರ್ಮಿಸಿದೆ. ಇದರಿಂದ ಸರ್ವ ಋತುವಿನಲ್ಲೂ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಕೆಲ ದಿನಗಳಿಂದ ತಂಗುದಾಣದಲ್ಲಿ ಸಿಮೆಂಟ್ ಗೋಣಿಚೀಲ ತುಂಬಿಸಿ ಇಡಲಾಗಿದೆ. ಅದರ ಎದುರುಗಡೆ ಭಾರೀ ಗಾತ್ರದ ಯಂತ್ರವನ್ನು ನಿಲ್ಲಿಸಿ ಬೇಕಾಬಿಟ್ಟಿಯಾಗಿ ಕಾಂಕ್ರೀಟ್ ಮಿಶ್ರಣದ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮರದಡಿ ಆಶ್ರಯ ಪಡೆಯುವಂತಾಗಿದೆ.
ಬಜಗೋಳಿ-ಹೊಸ್ಮಾರು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಕಬಳಿಸಿ, ರಸ್ತೆಯ ಮೇಲೆ ಕಾಂಕ್ರೀಟ್ ಮಿಶ್ರಣದ ವಾಹನ ನಿಲ್ಲಿಸಿರುವುದು ಇತರ ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. ತನ್ನ ಸ್ವಾರ್ಥಕ್ಕಾಗಿ ಸಾರ್ವಜನಿಕ ಸೊತ್ತನ್ನು ದುರುಪಯೋಗಪಡಿಸಿ ಹಾಳುಗೆಡವಿದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಲ್ಲೂರು ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಬಸ್ತಂಗುದಾಣದಲ್ಲಿ ಸಿಮೆಂಟ್ ಶೇಖರಿಸಿರುವ ಮಾಹಿತಿ ಇಲ್ಲ. ಬಸ್ತಂಗುದಾಣದಲ್ಲಿ ಸಿಮೆಂಟ್ ಶೇಖರಿಸಿಡಲು ಯಾರಿಗೂ ಪರವಾನಗಿ ನೀಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಲಾಗುವುದು.
|ಕವಿತಾ ಅಧ್ಯಕ್ಷೆ ನಲ್ಲೂರು ಗ್ರಾಪಂ